ಮಂಗಳೂರು, ಜುಲೈ 4: ಭಾರೀ ಕುತೂಹಲ ಮೂಡಿಸಿದ್ದ ಉಳಾಯಿಬೆಟ್ಟು ದರೋಡೆ ಪ್ರಕರಣ ಸಂಬಂಧಿಸಿ ಮಂಗಳೂರು ಪೊಲೀಸರು ಕೇರಳ ಮೂಲದ ನಟೋರಿಯಸ್ ದರೋಡೆಕೋರರು ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಯಾವುದೇ ಸುಳಿವು ಕೊಡದೆ ಎಸ್ಕೇಪ್ ಆಗಿದ್ದ ಆರೋಪಿಗಳ ಪತ್ತೆಗಾಗಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಕಂಕನಾಡಿ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್, ಎಸಿಪಿ ಗೀತಾ ಮತ್ತು ಸಿಸಿಬಿ ತಂಡಗಳು ಪ್ರತ್ಯೇಕವಾಗಿ ತನಿಖೆ ನಡೆಸಿದ್ದವು. ಆರಂಭದಲ್ಲಿ ಬಂಟ್ವಾಳ ಮೂಲಕ ಕಾರು ತೆರಳಿರುವುದು ಪತ್ತೆಯಾಗಿತ್ತು. ಆನಂತರ ತನಿಖೆ ವೇಳೆ ತಲಪಾಡಿ ಮೂಲಕ ಆರೋಪಿಗಳು ಪರಾರಿಯಾಗಿದ್ದು ತಿಳಿದುಬಂದಿತ್ತು.
ನೀರುಮಾರ್ಗ ನಿವಾಸಿಗಳಾದ ವಸಂತ ಕುಮಾರ್ (42), ರಮೇಶ ಪೂಜಾರಿ(42), ರೇಮಂಡ್ ಡಿಸೋಜ47), ಪೈವಳಿಕೆ ಕುರುಡಪದವು ನಿವಾಸಿ ಬಾಲಕೃಷ್ಣ ಶೆಟ್ಟಿ(48), ತೃಶೂರು ಜಿಲ್ಲೆಯ ಜಾಕಿರ್ ಯಾನೆ ಶಾಕೀರ್ (56), ವಿನೋಜ್ (38), ಸಜೀಶ್ (32), ಸತೀಶ್ ಬಾಬು(44), ಶಿಜೋ ದೇವಸ್ಸಿ (38), ತಿರುವನಂತಪುರ ಜಿಲ್ಲೆಯ ಬಿಜು (41) ಬಂಧಿತರು.
ತನಿಖೆಯ ಸಂದರ್ಭದಲ್ಲಿ ಪದ್ಮನಾಭ ಕೋಟ್ಯಾನ್ ಜೊತೆಗೆ ಲಾರಿ ಚಾಲಕನಾಗಿದ್ದ ನೀರುಮಾರ್ಗ ನಿವಾಸಿ ವಸಂತ ಪೂಜಾರಿ ಬಗ್ಗೆ ಶಂಕೆ ಉಂಟಾಗಿತ್ತು. ಕೋಟ್ಯಾನ್ ಮನೆಯಲ್ಲಿ ಕೋಟಿಗಟ್ಟಲೆ ಹಣ ಇದೆಯೆಂದು ಸ್ಥಳೀಯ ರೇಮಂಡ್ ಡಿಸೋಜ ಎಂಬವರ ಜೊತೆಗೆ ಚರ್ಚೆ ಮಾಡಿದ್ದರು. ಇದರಂತೆ, ಕೋಟ್ಯಾಂತರ ಹಣವನ್ನು ಲೂಟಿ ಮಾಡಲು ರೇಮಂಡ್ ಸ್ಕೆಚ್ ಹಾಕಿದ್ದ. ಇದಕ್ಕಾಗಿ ಕಾಸರಗೋಡು ಜಿಲ್ಲೆಯ ಪೈವಳಿಕೆ ಬಾಲಕೃಷ್ಣ ಶೆಟ್ಟಿ ಮತ್ತು ಕೆಲವು ಕೇರಳ ಮೂಲದ ಆರೋಪಿಗಳನ್ನು ಸಂಪರ್ಕ ಮಾಡಿದ್ದ. ಮನೆ ಹೇಗಿದೆ ಎನ್ನುವುದರ ಬಗ್ಗೆ ಸಂಪೂರ್ಣ ಸ್ಕೆಚ್ ಅನ್ನು ವಸಂತ ನೀಡಿದ್ದಲ್ಲದೆ, ಮನೆಯಲ್ಲಿ ಯಾರೆಲ್ಲ ಇದ್ದಾರೆಂದು ಆರೋಪಿಗಳಿಗೆ ಮಾಹಿತಿ ನೀಡಿದ್ದ.
300 ಕೋ.ರೂ. ಇದೆ ಎಂದು ಬಂದಿದ್ದ ತಂಡ! :ಮನೆಯಲ್ಲಿ ಹಣವಿರುವ ಬಗ್ಗೆ ವಸಂತ ಕುಮಾರ್ ಹಾಗೂ ಇತರರು ಮನೆಯಲ್ಲಿ 100 ಕೋ.ರೂ. ಹಣ ಇದೆ ಎಂದು ಮಾತುಕತೆ ನಡೆಸಿದ್ದು, ಇದು ಬಾಲಕೃಷ್ಣ ಶೆಟ್ಟಿಯಿಂದ ಕೇರಳ ತಂಡಕ್ಕೆ ತಲುಪುವಾಗ 300 ಕೋ.ರೂ.ಗೆ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ ತಂಡ ದರೋಡೆ ಮಾಡಿ ದುಡ್ಡು ಅಪಹರಿಸಲೆಂದೇ 15-20 ಗೋಣಿಗಳನ್ನು ತಂದಿದ್ದರು. ಜತೆಗೆ ಚಾಕು ಹಾಗೂ ಹಣ ತುಂಬಿಸಿರುವ ಕಪಾಟಿನ ಬಾಗಿಲು ತೆರೆಯಲು ಆಯುಧಗಳನ್ನೂ ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೂ.18ರಂದು “ಟ್ರಯಲ್’! : ದರೋಡೆ ನಡೆಸಲು 7-8 ತಿಂಗಳ ಹಿಂದಿನಿಂದಲೇ ಯೋಜನೆ ರೂಪಿಸಲಾಗಿತ್ತು. ಅದರಂತೆ ಪಂಪ್ವೆಲ್ ಬಳಿ ಬಂದಿದ್ದ ಕೇರಳದ ತಂಡ ಸ್ಥಳೀಯ ತಂಡವನ್ನು ಭೇಟಿ ಮಾಡಿ ಚರ್ಚಿಸಿತ್ತು. ಮನೆಯ ಪ್ರದೇಶ, ಮನೆಯಲ್ಲಿ ಯಾರೆಲ್ಲ ಇರುತ್ತಾರೆ, ಸ್ಥಳದ ಮ್ಯಾಪ್ ಎಲ್ಲವನ್ನೂ ಪರಿಶೀಲಿಸಿತ್ತು. ಜೂ.18ರಂದು ಒಂದು ಬಾರಿ ಟ್ರಯಲ್ ರೀತಿಯಲ್ಲಿ ದರೋಡೆಯ ಪ್ರಯತ್ನ ನಡೆಸಿದ್ದರು. ಆದರೆ ಅಂದು ವಿಫಲವಾಯಿತು. ದರೋಡೆ ವೇಳೆ ಜಾಕೀರ್ ಹುಸೇನ್ “ಹಿಂದಿ’ಯಲ್ಲಿ ಮಾತನಾಡಿ ದಾರಿತಪ್ಪಿಸಲು ಯತ್ನಿಸಿದ್ದ ಎಂದು ಆಯುಕ್ತರು ತಿಳಿಸಿದರು.
ಜೂ.21ರಂದು ರಾತ್ರಿ ಸುಮಾರು 10ಕ್ಕೂ ಅಧಿಕ ಮಂದಿ ಆರೋಪಿಗಳು ಪದ್ಮನಾಭ ಕೋಟ್ಯಾನ್ರ ಮನೆಗೆ ನುಗ್ಗಿ ಪದ್ಮನಾಭ ಕೋಟ್ಯಾನ್ ಮತ್ತವರ ಪತ್ನಿ ಮತ್ತು ಮಗನನ್ನು ಕಟ್ಟಿ ಹಾಕಿ ಚಿನ್ನಾಭರಣ ಮತ್ತು ನಗದು ಸಹಿತ 9 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ಭಾಗಿಯಾಗಿದ್ದು, ಅವರನ್ನು ಶೀಘ್ರ ಬಂಧಿಸಲಾಗುವುದು. ಪ್ರಕರಣದ ಮುಖ್ಯ ಸೂತ್ರಧಾರಿ ವಸಂತ ಪೂಜಾರಿ ಆಗಿದ್ದು, ಈತ ನೀರುಮಾರ್ಗ ಗ್ರಾಪಂ ಸದಸ್ಯನಾಗಿದ್ದು, ಪದ್ಮನಾಭ ಕೋಟ್ಯಾನ್ ಅವರ ಲಾರಿ ಚಾಲಕನಾಗಿದ್ದ ಎಂದು ಕಮಿಷನರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಸಿದ್ಧಾರ್ಥ್ ಗೋಯೆಲ್, ಬಿ.ಪಿ.ದಿನೇಶ್ ಕುಮಾರ್, ಎಸಿಪಿ ಧನ್ಯಾ ನಾಯಕ್ ಉಪಸ್ಥಿತರಿದ್ದರು.
Discussion about this post