ಉಪ್ಪಿನಂಗಡಿ: ಅಕ್ರಮ ಮರಳುಗಾರಿಕೆ ಮೂಲಕ ನೇತ್ರಾವತಿಯ ಒಡಲನ್ನು ಬರಿದಾಗಿಸುತ್ತಿರುವ ಮಧ್ಯೆಯೇ ಪೆರ್ನೆ ಬಳಿ ನದಿಯಲ್ಲಿರುವ ಬೃಹತ್ ಬಂಡೆ ಕಲ್ಲುಗಳನ್ನು ಒಡೆದು ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.
ಪೆರ್ನೆ ಮತ್ತು ತೆಕ್ಕಾರು ಗ್ರಾಮದಲ್ಲಿ ನೇತ್ರಾವತಿ ನದಿಗೆ ಸುಮಾರು ರೂ. 50 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಯೋಜನೆ ಅಡಿಯಲ್ಲಿ ಕಿಂಡಿ ಅಣೆಕಟ್ಟೆ ಮತ್ತು ಸೇತುವೆ ನಿರ್ಮಾಣ ನಡೆಯುತ್ತಿದೆ. ಇದರ ಪಕ್ಕದಲ್ಲೇ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಬೃಹತ್ ಯಂತ್ರಗಳನ್ನು ಬಳಸಿ ಬಂಡೆಕಲ್ಲುಗಳನ್ನು ಒಡೆಯಲಾಗುತ್ತಿದೆ. ಒಡೆದ ಕಲ್ಲುಗಳನ್ನು ಯಂತ್ರದ ಮೂಲಕ ಹೊರ ತೆಗೆಯಲಾಗುತ್ತಿದೆ. ಕಲ್ಲು ಸಿಡಿಸುವಾಗ ಭಾರಿ ಶಬ್ದದಿಂದ ಪರಿಸರದಲ್ಲಿ ಕಂಪನ ಉಂಟಾಗುತ್ತಿದೆ ಎಂದು ಸ್ಥಳೀಯತರು ದೂರಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಕಿಂಡಿ ಅಣೆಕಟ್ಟೆ, ಸೇತುವೆ ಸಮೀಪದಲ್ಲೇ ಸ್ಫೋಟ ಮಾಡುತ್ತಿರುವುದರಿಂದ ಅಣೆಕಟ್ಟೆಯ ಅಡಿಪಾಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ರೈತರ ಉಪಯೋಗಕ್ಕೆ ಅಣೆಕಟ್ಟೆ ಲಭಿಸುವ ಮುನ್ನವೇ ಬಿರುಕು ಬಿಡಲಾರಂಭಿಸಿದರೆ ಸರ್ಕಾರದ ಯೋಜನೆ ವ್ಯರ್ಥವಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಮರಳುಗಾರಿಕೆ ತಡೆ ಹಿಡಿಯಲಾಗಿತ್ತು: ಇದೇ ಪರಿಸರದಲ್ಲಿ ಕೆಲ ತಿಂಗಳ ಹಿಂದೆ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿತ್ತು. ಅಣೆಕಟ್ಟೆ ಮತ್ತು ಸೇತುವೆಗೆ ಅಪಾಯ ಉಂಟಾಗುವ ಸಾಧ್ಯತೆಯ ಬಗ್ಗೆ ಮನಗಂಡ ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದರಿಂದ ಅದನ್ನು ತಡೆ ಹಿಡಿಯಲಾಗಿತ್ತು. ಆದರೆ, ಇದೀಗ ಕಲ್ಲು ಗಣಿಗಾರಿಕೆಯನ್ನು ತಡೆಯುವ ಪ್ರಯತ್ನ ಆಗಿಲ್ಲ ಎಂಬ ದೂರು ಕೇಳಿಬಂದಿದೆ.

ಅಣೆಕಟ್ಟೆ ಹೆಸರ ಅಕ್ರಮ ದಂಧೆ: ಪೆರ್ನೆ-ತೆಕ್ಕಾರು ಮಧ್ಯೆ ನಡೆಯುತ್ತಿರುವ ಅಣೆಕಟ್ಟೆ ಮತ್ತು ಸೇತುವೆ ಬಹುಕಾಲದ ಬೇಡಿಕೆಯಾಗಿದ್ದು, ಸುಮಾರು ರೂ. 50 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ಸೇತುವೆಯಿಂದ ಕೇವಲ 50 ಮೀಟರ್ ಅಂತರದಲ್ಲಿ ಕಲ್ಲು ಒಡೆಯಲಾಗುತ್ತಿದೆ. ಇದೊಂದು ಅಕ್ರಮ ದಂಧೆಯಾಗಿದ್ದು, ಇಲ್ಲಿ ತೆಗೆಯುವ ಕಲ್ಲುಗಳನ್ನು ಬೇರೆ ಕಡೆಗೆ ಸಾಗಿಸಲಾಗುತ್ತಿದೆ. ಸಂಬಂಧಿಸಿದ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳಬೇಕು ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೋಬ್ಬರು ಆಗ್ರಹಿಸಿದ್ದಾರೆ. ಸೇತುವೆ ಅಡಿಯಲ್ಲಿ ಯಂತ್ರ ಬಳಸಿ ಗಣಿಗಾರಿಕೆ ಬಂಡೆ ಒಡೆಯುವಾಗ ಪರಿಸರದಲ್ಲಿ ಕಂಪನ
ಮರಳುಗಾರಿಕೆಗೂ ಅವಕಾಶವಿಲ್ಲ: ಇಲ್ಲಿ ಕಿಂಡಿ ಅಣೆಕಟ್ಟಿನೊಂದಿಗೆ 5.50 ಮೀ.ನ ಸೇತುವೆಯೂ ಬರುತ್ತಿದ್ದು, ಇದು ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಗ್ರಾಮಗಳಿಗೆ ಸಂಪರ್ಕ ಸೇತುವಾಗಿಯೂ ಕೆಲಸ ಮಾಡಲಿದೆ. ಸೇತುವೆಯ 500 ಮೀ. ತನಕ ಮರಳುಗಾರಿಕೆಗೂ ನಿಯಮ ಪ್ರಕಾರ ಅವಕಾಶವಿಲ್ಲ. ಆದರೆ ಇಡೀ ಪರಿಸರವನ್ನೇ ಕಂಪನ ಮಾಡುವ ಇಂತಹ ಕಲ್ಲುಗಣಿಗಾರಿಕೆ ಈ ಕಿಂಡಿ ಅಣೆಕಟ್ಟಿನ ಬುಡದಲ್ಲೇ ನಡೆದರೆ ಈ ಕಿಂಡಿ ಅಣೆಕಟ್ಟಿಗೆ ಅನಾಹುತವಾಗುವ ಸಂಭವವಿದೆ. ಆದರೂ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಮೌನವಾಗಿದ್ದು ಯಾಕೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಅಣೆಕಟ್ಟು ರೈತರ ಉಪಯೋಗಕ್ಕೆ ಲಭಿಸುವ ಮುನ್ನವೇ ಬಿರುಕು ಬಿಡಲಾರಂಭಿಸಿದರೆ ಇಂತದೊಂದು ಬೃಹತ್ ಯೋಜನೆ ರೈತರ ಪಾಲಿಗೆ ವರದಾನವಾಗುವುದಾದರೂ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಇಲ್ಲಿನ ಕಲ್ಲು ಗಣಿಗಾರಿಕೆ ಅಕ್ರಮವೇ? ಸಕ್ರಮವೇ ತಿಳಿದಿಲ್ಲ. ಸಕ್ರಮವಾದರೆ ನಿಯಮಗಳನ್ನು ಗಾಳಿಗೆ ತೂರಿ ಕಿಂಡಿ ಅಣೆಕಟ್ಟಿನ ಬುಡದಲ್ಲಿಯೇ ಇದಕ್ಕೆ ಅವಕಾಶ ಕೊಟ್ಟವರು ಯಾರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post