ಮಂಗಳೂರು: ಮಹಿಳೆ ಯೊಬ್ಬರಿಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ ಒಂದು ಲಕ್ಷ ರೂ.ಗಳನ್ನು ಪಡೆದು ವಂಚಿಸಿದ ಆರೋಪದಲ್ಲಿ ಕೂಳೂರು ಉಸ್ತಾದ್, ಗುರುವಾಯನಕೆರೆಯ ನಿವಾಸಿ ಜಿ. ಅಬ್ದುಲ್ ಕರೀಮ್ನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ: 2022ರಲ್ಲಿ ಸಂತ್ರಸ್ತೆಗೆ ಖಿನ್ನತೆಯ ಸಮಸ್ಯೆ ಉಂಟಾಗಿದ್ದು, ಆಕೆ ತನ್ನ ಅಕ್ಕನ ಗಂಡನ ಸಲಹೆಯಂತೆ ಆಗ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಮನೆಗೆ ಹೋಗಿದ್ದರು. ಅಲ್ಲಿ ಕೂಳೂರು ಉಸ್ತಾದ್ ಎಂಬ ಹೆಸರಿನ ಈ ಅಬ್ದುಲ್ ಕರೀಮ್ ಎಂಬಾತ ಮಹಿಳೆಯನ್ನು ನೋಡಿ ನಿಮಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ನಂಬಿಸಿ ಅದನ್ನು ತೆಗೆಸಬೇಕು ಎಂದು ಹೇಳಿದನೆನ್ನಲಾಗಿದೆ. ಮಾಟ ಮಂತ್ರ ನಿವಾರಿಸುವ ಚಿಕಿತ್ಸೆ ಕೊಡುತ್ತೇನೆ ಎಂದು ನಂಬಿಸಿ ಆ ಮಹಿಳೆಯನ್ನು ಆಗಾಗ ಬರಲು ತಿಳಿಸಿದ್ದಾನೆ ಈ ಅಬ್ದುಲ್ ಕರೀಮ್. ಮಹಿಳೆ ತನ್ನ ಅಕ್ಕನ ಜೊತೆ ಈ ವ್ಯಕ್ತಿ ಬಳಿ ಹಲವು ಬಾರಿ ಹೋಗಿದ್ದಾರೆ. ಅಲ್ಲಿ ಈತ ಕೆಲವು ಬಾರಿ ಮಹಿಳೆಗೆ ಕುರ್ಆನ್ ಓದಿಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಕೆ ಹೇಳಿದ್ದಾರೆ. 2022, ಫೆ.10 ರಂದು ಸಂತ್ರಸ್ತೆಯ ಅಕ್ಕನಿಗೆ ಕೆಲಸ ಇದ್ದ ಕಾರಣ ಸಂತ್ರಸ್ತೆ ಒಬ್ಬಳೇ ಹೆಜಮಾಡಿ ಮನೆಗೆ ಹೋಗಿದ್ದರೆನ್ನಲಾಗಿದೆ. ಅಲ್ಲಿ ಉಸ್ತಾದ್ ಆಕೆಯಲ್ಲಿ ಕುರ್ಆನ್ ಓದಿಸಿ, ಬಳಿಕ ಆಕೆಗೆ ಚಿಕಿತ್ಸೆಯ ನೆಪದಲ್ಲಿ ಮೈಮುಟ್ಟಿ ಕಿರುಕುಳ ನೀಡಿದ್ದಾನೆ ಮತ್ತು ಮಹಿಳೆಯಿಂದ 55,000 ರೂ. ಪಡೆದಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಬಾಲಕೃಷ್ಣ ನಾಯಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post