ಬಂಟ್ವಾಳ/ವಿಟ್ಲ: ‘ಮುಂದಿನ ಜನಾಂಗಕ್ಕೆ ಪರಿಶುದ್ಧ ಗಾಳಿ ಮತ್ತು ನೀರು ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಗಾಗಿ ಸಸ್ಯಗಳನ್ನು ಬೆಳೆಸಬೇಕು. ಗುರು ಬೆಳದಿಂಗಳು ಸಂಘಟನೆ ಪ್ರಕೃತಿಗೆ ಬೆಳಕು ಚೆಲ್ಲುವ ಕಾಯಕದಲ್ಲಿ ತೊಡಗಿದೆ’ ಎಂದು ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುದ್ರೋಳಿ ಗುರು ಬೆಳದಿಂಗಳು ಸಂಘಟನೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮ ಜಯಂತಿ ಪ್ರಯುಕ್ತ ಅನಂತಾಡಿ ಬಾಕಿಲಗುತ್ತು ಉಳ್ಳಾಲ್ತಿ ವೈದ್ಯನಾಥೇಶ್ವರ ಕ್ಷೇತ್ರ, ಬ್ರಹ್ಮ ಬೈದರ್ಕಳ ಗರಡಿ ಬಳಿ ಸೋಮವಾರ ನಡೆದ ಸರಣಿ ಔಷಧೀಯ ಸಸಿ ನೆಡುವ ಕಾರ್ಯಕ್ರಮದ ಸಮಾರೋಪ ಮತ್ತು 167 ಗಿಡಗಳ ‘ಗುರುವನ’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ‘ಸಂಘ ಸಂಸ್ಥೆಗಳು ಬೆಳೆಯಬೇಕಾದರೆ ನಿಸ್ವಾರ್ಥ ಮನೋಭಾವ ಬೇಕು. ಈ ನಿಟ್ಟಿನಲ್ಲಿ ಗುರುಬೆಳದಿಂಗಳು ಸಂಘಟನೆ ಬೆಳೆಯಲಿ’ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಮಾತನಾಡಿದರು. ಗುರು ಬೆಳದಿಂಗಳು ಅಧ್ಯಕ್ಷ ಆರ್. ಪದ್ಮರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪರಿಸರಪ್ರೇಮಿ ಮಾಧವ ಉಳ್ಳಾಲ್, ಸಮಾಜ ಸೇವಕ ರೋಹಿದಾಸ್ ಅವರನ್ನು ಗೌರವಿಸಲಾಯಿತು.
Discussion about this post