ಮಂಗಳೂರು: ನಗರದ ಬಳ್ಳಾಲ್ಬಾಗ್ನ ಅಪಾರ್ಟ್ಮೆಂಟೊಂದರಲ್ಲಿ ವಾಸವಿದ್ದ, ಮದುವೆ ನಿಶ್ಚಿತಾರ್ಥವಾಗಿದ್ದ ರೇಶ್ಮಾ (21)ಎಂಬಾಕೆ ಚಿನ್ನಾಭರಣದೊಂದಿಗೆ ನಾಪತ್ತೆಯಾಗಿರುವ ಬಗ್ಗೆ ತಾಯಿ ಯಶೋದಾ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೂಲತಃ ಗದಗದ ನಿವಾಸಿಗಳಾಗಿದ್ದು, ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಪಾರ್ಟ್ಮೆಂಟ್ವೊಂದರಲ್ಲಿ ವಾಚ್ಮನ್ ಆಗಿರುವ ಯಶೋಧಾ ಅವರ ಪುತ್ರಿ ರೇಶ್ಮಾ (21) ಅವರ ನಿಶ್ಚಿತಾರ್ಥ ಆ. 21ರಂದು ನಡೆದಿತ್ತು.
ನಿಶ್ಚಿತಾರ್ಥ ಸಂದರ್ಭ ಹುಡುಗನ ಮನೆಯವರು ಅಂದಾಜು ಒಂದು ಲ.ರೂ. ಮೌಲ್ಯದ ಚಿನ್ನದ ಸರ, 50,000 ರೂ. ಮೌಲ್ಯದ ಚಿನ್ನದ ಉಂಗುರ, ಕಿವಿಯೋಲೆ, ಬೆಳ್ಳಿ ಕಾಲುಗೆಜ್ಜೆ ಹಾಕಿದ್ದರು. ರೇಶ್ಮಾ ಆ. 26ರಂದು ಈ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಳೆ. ಅಲ್ಲದೆ ಮನೆಯವರು ಬ್ಯಾಂಕ್ನಲ್ಲಿ ಜಮೆ ಮಾಡಿಟ್ಟಿದ್ದ 90,000 ರೂ. ಹಣವನ್ನು ಅಕ್ಬರ್ ಅಲಿ ಎಂಬಾತನ ಖಾತೆಗೆ ವರ್ಗಾಯಿಸಿದ್ದಾಳೆಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.