ಮಂಗಳೂರು: ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್ ಅನ್ನು ನಗರದಲ್ಲಿ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ನಗರದ ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ಬಕ್ರೀದ್ ಪ್ರಯುಕ್ತ ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಲೈಟ್ಹೌಸ್ನ ಈದ್ಗಾ ಮಸೀದಿ, ಬಂದರ್ನ ಝೀನತ್ ಬಕ್ಷ್ ಸೆಂಟ್ರಲ್ ಮಸೀದಿ, ಕಾಪ್ರಿಗುಡ್ಡದ ಜುಮ್ಮಾ ಮಸೀದಿಯಲ್ಲಿ, ಹಂಪನಕಟ್ಟೆಯ ಅಲ್ ನೂರ್ ಮಸೀದಿ, ಕುದ್ರೋಳಿಯ ಮೊಯಿದ್ದೀನ್ ಜುಮಾ ಮಸೀದಿ, ನಡುಪಳ್ಳಿ ಮಸೀದಿ ಮತ್ತು ಜಾಮಿಯಾ ಮಸೀದಿ, ರಥಬೀದಿಯ ಶಮೀರ್ ಮಸೀದಿ, ಬೋಳಾರದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಜೆಪ್ಪು ಕುಡುಪಾಡಿಯ ಬದ್ರಿಯಾ ಜುಮ್ಮಾ ಮಸೀದಿ, ಕಂಡತ್ತಪಳ್ಳಿ ಮಸೀದಿ, ಪೊಲೀಸ್ ಲೇನ್ನ ಫೌಜಿಯಾ ಮಸೀದಿ, ಕಂದಕ್ನ ಬದ್ರಿಯಾ ಮಸೀದಿ, ಕಂಕನಾಡಿಯ ಜುಮ್ಮಾ ಮಸೀದಿ, ಪಂಪ್ವೆಲ್ನ ತಖ್ವ ಮಸೀದಿ, ಜೆಪ್ಪುವಿನ ಮೊಹಿಯುದ್ದಿನ್ ಜುಮ್ಮಾ ಮಸೀದಿಗಳಲ್ಲಿ ಬಕ್ರೀದ್ ಪ್ರಯುಕ್ತ ನಡೆದ ವಿಶೇಷ ಸಾಮೂಹಿಕ ಪ್ರಾರ್ಥನೆಗಳಲ್ಲಿ ಮುಸ್ಲಿಮರು ಭಾಗವಹಿಸಿದರು. ಪರಸ್ಪರ ಆಲಂಗಿಸಿ ಶುಭಾಶಯ ಕೋರಿದರು.
ಕೋವಿಡ್-19 ಸೋಂಕು ತಡೆಗಟ್ಟುವ ಸಲುವಾಗಿ ಸರಕಾರ ರೂಪಿಸಿದ್ದ ನಿಯಮಾವಳಿಯನ್ನು ಪಾಲಿಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷ ಈದುಲ್ ಅಝ್ಹಾ (ಬಕ್ರೀದ್)ವನ್ನು ಅತ್ಯಂತ ಸರಳವಾಗಿ ಆಚರಿಸಿದ್ದರು. ಆದರೆ ಈ ಬಾರಿ ಸರಕಾರ ಯಾವುದೇ ನಿಯಮಾವಳಿ ರೂಪಿಸದ ಕಾರಣ ದ.ಕ. ಜಿಲ್ಲೆಯಲ್ಲಿ ಈದುಲ್ ಅಝ್ಹಾದ ಸಂಭ್ರಮ ಕಂಡು ಬಂದಿದೆ. ಈ ಸಲ ಮಕ್ಕಳಿಂದ ಹಿಡಿದು ವಯೋವೃದ್ಧರು ಉತ್ಸಾಹದಿಂದ ಪ್ರಾರ್ಥನೆಗಳಲ್ಲಿ ಭಾಗವಹಿಸಿದ್ದು ಕಂಡುಬಂತು.
Discover more from Coastal Times Kannada
Subscribe to get the latest posts sent to your email.
Discussion about this post