ಮಂಗಳೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಇಬ್ಬರು ಕೊಲೆ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಪದ್ಮನ್ನೂರು ಬಳಿ ನಡೆದಿದೆ. ಕಳೆದ ಸೋಮವಾರ ರಾತ್ರಿ ಬೈಕಂಪಾಡಿ ಸಮೀಪದ ಮೀನಕಳಿ ಬಳಿ ನಡೆದ ರೌಡಿ ಶೀಟರ್ ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಅರ್ಜುನ್ ಮೂಡುಶೆಡ್ಡೆ ಮತ್ತು ಮನೋಜ್ ಯಾನೆ ಬಿಂದಾಸ್ ಮನೋಜ್ ಬಂಧಿತ ಆರೋಪಿಗಳು.
ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಇನ್ನಷ್ಟು ಆರೋಪಿಗಳ ಬಂಧನಕ್ಕೆ ಕೊಂಡೊಯ್ಯುವ ವೇಳೆ ಈ ಇಬ್ಬರು ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮೂರು ಸುತ್ತು ಫೈರಿಂಗ್ ನಡೆಸಿದ್ದು, ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ.
ಘಟನೆಯಲ್ಲಿ ಪಿಎಸ್ ಐ ನಾಗೇಂದ್ರ, ಎಎಸ್ ಐ ಡೇವಿಡ್, ಎಎಚ್ ಸಿ ಸಂತೋಷ್ ಪೂಜಾರಿ ಎಂಬವರು ಗಾಯಗೊಂಡಿದ್ದಾರೆ. ಕೊಲೆ ಯತ್ನ ಸಹಿತ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದ ಕುಳಾಯಿಯ ರಾಜಾ ಯಾನೆ ರಾಘವೇಂದ್ರ ಕಳೆದ ಸೋಮವಾರ (ಜೂ.6) ರಾತ್ರಿ 7.30ರ ಸುಮಾರಿಗೆ ಬೈಕಂಪಾಡಿ ಸುಪ್ರಿಯಾ ಬಾರ್ ಬಳಿಯಿಂದ ಮೀನಕಳಿಯ ರಸ್ತೆಯಾಗಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಬಳಿಕ ತಲವಾರು ಮತ್ತು ಚಾಕುವಿನಿಂದ ಮುಖ, ತಲೆ, ಕೈಗೆ ಹೊಡೆದಿದ್ದು, ರಾಜಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿ ಬಿದ್ದಿದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ್ದ ಪೊಲೀಸರು ರಾಜಾನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಸ್ಪತ್ರೆಯಲ್ಲಿ ರಾಜಾ ಮೃತಪಟ್ಟಿದ್ದ.
Discover more from Coastal Times Kannada
Subscribe to get the latest posts sent to your email.
Discussion about this post