ಮಂಗಳೂರು: ನಗರದ ಕಂಕನಾಡಿಯ ಬ್ರಹ್ಮಬೈದರ್ಕಳ ಗರಡಿ 150ನೇ ವರ್ಷಾಚರಣೆ ಸಂಭ್ರಮಾಚರಣೆಗೆ ಸಜ್ಜಾಗಿದೆ. ಈ ಸಲುವಾಗಿ ಆರಂಭಿಸಲಾದ ಕಾರ್ಯಾಲಯವನ್ನು ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಅವರು ಭಾನುವಾರ ಉದ್ಘಾಟಿಸಿದರು. ‘ಎಲ್ಲರಿಗೂ ಶುಭವಾಗಲಿ. ಈ ಕಾರ್ಯಕ್ರಮ ಸಾಂಗವಾಗಿ ನೆರವೇರಲಿ’ ಎಂದು ಅವರು ಶುಭ ಹಾರೈಸಿದರು.

ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್, ‘ಗರಡಿಯ 150ನೇ ವರ್ಷಾಚರಣೆಯನ್ನು ಹಮ್ಮಿಕೊಳ್ಳುವ ಶುಭ ಸಂದರ್ಭದ ನಮಗೆ ಒದಗಿ ಬಂದಿದೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಕೋರಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ‘ಸ್ಮಾರ್ಟ್ ಸಿಟಿ ಯೋಜನೆಯಡಿ ಪಂಪ್ವೆಲ್–ಪಡೀಲ್ ನಡುವಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಗರಡಿ ಕ್ಷೇತ್ರದ 150ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಮುನ್ನ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳುತ್ತೇನೆ’ ಎಂದರು.
ದಿನೇಶ್ ಅಂಚನ್, ‘ಗರಡಿಯ 150ನೇ ವರ್ಷಾಚರಣೆ ಪ್ರಯುಕ್ತ 2023ರ ಮಾರ್ಚ್ 4ರಿಂ’ದ 9ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಈ ಸಂಭ್ರಮಾಚರಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಹಮ್ಮಿಕೊಂಡಿರುವ ನಾಗಮಂಡಲೋತ್ಸವದಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. 2023ರ ಜ.5ರಿಂದ ಐದು ದಿನಗಳ ಕಾಲ ಗರಡಿ ಕ್ಷೇತ್ರದ ವಾರ್ಷಿ ಜಾತ್ರೋತ್ಸವ ನಡೆಯಲಿದೆ’ ಎಂದರು.

ವಿಶ್ವ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ಮರೋಳಿ ಸೂರ್ಯನಾರಾಯಣ ದೇವಸ್ಥಾನ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಕೆ.ಪಿ.ಶೆಟ್ಟಿ, ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೃಷ್ಣಮೂರ್ತಿ, ಗರಡಿಯ 150ರ ಸಂಭ್ರಮ ಸಮಿತಿಯ ಪ್ರಧಾನ ಸಂಚಾಲಕ ಮೋಹನ್ ಉಜ್ಜೋಡಿ, ಕಂಕನಾಡಿ ಗರಡಿಯ ಮೊಕ್ತೇಸರ ದಾಮೋದರ ನಿಸರ್ಗ, ಕ್ಷೇತ್ರದ ಟ್ರಸ್ಟಿಗಳಾದ ಜೆ.ವಿಜಯ್, ದಿವ್ರಾಜ್, ವಿಠಲ ಜೆ., ವಾಮನ ಅಳಪೆ , ಪಾಲಿಕೆ ಸದಸ್ಯರಾದ ಪ್ರವೀಣ ಚಂದ್ರ ಆಳ್ವ, ವೀಣಾ ಮಂಗಳ ಹಾಗೂ ಅನಿಲ್ ಪೂಜಾರಿ ಅವರು ಭಾಗವಹಿಸಿದ್ದರು. ಪಾಲಿಕೆ ಸದಸ್ಯ ಸಂದೀಪ್ ವಂದಿಸಿದರು.

Discover more from Coastal Times Kannada
Subscribe to get the latest posts sent to your email.







Discussion about this post