ಉಡುಪಿ : ನಗರದ ಗೃಹೋಪಯೋಗಿ ಮಳಿಗೆಯೊಂದರ ಮ್ಯಾನೇಜರ್ಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸೆಕ್ಯುರಿಟಿ ಗಾರ್ಡ್ನನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಗೃಹೋಪಯೋಗಿ ಮಳಿಗೆಯ ಸೆಕ್ಯೂರಿಟಿ ಗಾರ್ಡ್, ಪ್ರಸಾದ್ ಬಂಧಿತ ಆರೋಪಿ. ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡ ಹರ್ಷ ಮಳಿಗೆಯ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಎವರೆಸ್ಟ್ ಡಿಸೋಜ(36) ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆ.9ರಂದು ಕೆಲಸಕ್ಕೆ ಬಂದಿದ್ದ ಪ್ರಸಾದ್, ಮಧ್ಯಾಹ್ನದವರೆಗೆ ಮಾತ್ರ ಕೆಲಸ ಮಾಡಿ ಹೋಗಿದ್ದನು. ಈ ಕುರಿತು ಆತನ ಸೆಕ್ಯೂಟಿರಿ ಗಾರ್ಡ್ ಕಂಪನಿಯ ಮ್ಯಾನೇಜರ್ಗೆ ತಿಳಿಸಲಾಗಿತ್ತು. ಆ.10ರಂದು ಪ್ರಸಾದ್ ಕೆಲಸಕ್ಕೆ ಹಾಜರಿದ್ದು, ಸಂಜೆ ವೇಳೆ ರೋನ್ಸನ್ ಡಿಸೋಜ ಅವರನ್ನು ಪ್ರಸಾದ್ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ಶೋರೂಂಗೆ ಬರಲು ತಿಳಿಸಿದ್ದನು. ಅದರಂತೆ ಬಂದ ರೋನ್ಸನ್ ಅವರಲ್ಲಿ ನನ್ನನ್ನು ಕೆಲಸದಿಂದ ತೆಗೆಯಬೇಡಿ ಎಂದು ಪ್ರಸಾದ್ ಹೇಳಿದನು. ಅದಕ್ಕೆ ಮರುದಿನ ಅಧಿಕಾರಿಗಳೊಂದಿಗೆ ಮೀಟಿಂಗ್ನಲ್ಲಿ ಚರ್ಚಿಸಿ ತಿಳಿಸುತ್ತೇನೆ ಎಂದು ಹೇಳಿದ್ದರು.
ಇದರಿಂದ ಸಿಟ್ಟುಗೊಂಡ ಪ್ರಸಾದ್, ಅವಾಚ್ಯ ಶಬ್ಧಗಳಿಂದ ಬೈದಿದ್ದು, ಕಟ್ಟಡದ ಗ್ರೌಂಡ್ ಪ್ಲೋರ್ನಲ್ಲಿ ರೋನ್ಸನ್ ಡಿಸೋಜರನ್ನು ಅಡ್ಡಗಟ್ಟಿ ಚೂರಿಯಿಂದ ಕುತ್ತಿಗೆ, ಎದೆಗೆ ಚುಚ್ಚಿ, ಕಾಲಿನಿಂದ ಒದ್ದು, ಬೆದರಿಕೆ ಹಾಕಿ ಪರಾರಿಯಾಗಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
Discussion about this post