ತುಮಕೂರು: ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಕೊರಟಗೆರೆ ಪಟ್ಟಣದ ವಿದ್ಯಾರ್ಥಿನಿ ಗ್ರೀಷ್ಮಾ ನಾಯಕ್ಗೆ ಮಾಜಿ ಡಿಸಿಎಂ, ಕಾಂಗ್ರೆಸ್ ಮುಖಂಡ ಡಾ.ಜಿ.ಪರಮೇಶ್ವರ ಅವರು ಸಿದ್ದಾರ್ಥ ವಿದ್ಯಾಸಂಸ್ಥೆಯಿಂದ 50 ಸಾವಿರ ರೂ. ಚೆಕ್ ನೀಡಿದ್ದಾರೆ. ಅಲ್ಲದೇ, ಉಚಿತ ಮೆಡಿಕಲ್ ಸೀಟ್ ನೀಡುವುದಾಗಿ ವಿದ್ಯಾರ್ಥಿಯ ಪೋಷಕರಿಗೆ ಧೈರ್ಯ ತುಂಬಿದರು.
ಕೊರಟಗೆರೆ (ತುಮಕೂರು) ಪಟ್ಟಣದ ವಿದ್ಯಾರ್ಥಿ ಗ್ರೀಷ್ಮಾ ನಾಯಕ್ ಮತ್ತು ಪೋಷಕರ ಜತೆ ಮಾತನಾಡಿದ ಡಾ.ಜಿ.ಪರಮೇಶ್ವರ್, ‘ನಿಮ್ಮ ಜತೆ ನಾನಿದ್ದೇನೆ. ಕೊರಟಗೆರೆ ಕ್ಷೇತ್ರದ ಶಿಕ್ಷಣಕ್ಕೆ ಉತ್ತೇಜನ ನೀಡುವಂತಹ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದೀಯಾ. ನಿಮ್ಮ ಮಗುವಿನ ಜತೆ ನಾನಿದ್ದೇನೆ, ನನ್ನ ವಿದ್ಯಾಸಂಸ್ಥೆಯಲ್ಲಿ ನಿನಗೆ ಮೆಡಿಕಲ್ ಸೀಟ್ ಕೊಡುತ್ತೇನೆ’ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.
ಎಸ್ಸೆಸ್ಸೆಲ್ಸಿ ಪ್ರಧಾನ ಪರೀಕ್ಷೆ ಹಾಲ್ ಟಿಕೆಟ್ ಕೈ ತಪ್ಪಿದ್ದಕ್ಕೆ ನೊಂದಿದ್ದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಿದ್ಯಾರ್ಥಿನಿ ಎನ್. ಗ್ರೀಷ್ಮಾ ನಾಯಕ್ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೇ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಪೂರಕ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಗ್ರೀಷ್ಮಾಗೆ 599 (95.8%) ಅಂಕ ದೊರಕಿದೆ. ಕೊರೊನಾ ಕಾರಣದಿಂದ ಒಂದೇ ಒಂದು ದಿನ ಶಾಲೆಗೆ ಹೋಗಲಾಗದೆ ಇದ್ದ ಆಕೆ ಅಕ್ಕನಿಂದ ಪಾಠ ಹೇಳಿಸಿಕೊಂಡಿದ್ದಳು. ಮನೆಯವರು ಮತ್ತು ಆತ್ಮೀಯರ ಬೆಂಬಲದಿಂದ ಆತ್ಮಸ್ಥೈರ್ಯ ಬೆಳೆಸಿಕೊಂಡು ಈಗ ಸಾಧನೆ ಮಾಡಿದ್ದಾರೆ.
Discussion about this post