ಬೆಂಗಳೂರು, ಫೆ.13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ವ್ಯಾಪ್ತಿಯ ಎಂ ಸತ್ಯವಾರ ಗ್ರಾಮದ ಸಮೀಪ ಇಂದು ನಸುಕಿನ ಜಾವ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಮಹೀಂದ್ರಾ ಎಕ್ಸ್ಯುವಿ 700 ಕಾರು ಮೊದಲು ಮುಂದೆ ಸಾಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು, ನಂತರ ಡಿವೈಡರ್ಗೆ ಅಪ್ಪಳಿಸಿ ಪಲ್ಟಿಯಾಗಿ ಎದುರು ಬರುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ. ಸರಣಿ ಡಿಕ್ಕಿಗಳ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 6 ವಿದ್ಯಾರ್ಥಿಗಳು ಹಾಗೂ ಬೈಕ್ ಸವಾರ ಗಗನ್ (26) ಸೇರಿ ಒಟ್ಟು 7 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಗನ್ ಬೈಕ್ ಮೇಲಿಂದ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ವೇಗವಾಗಿದ್ದ ಯುವಕರಿದ್ದ XUV 700 ಕಾರು ನಿಯಂತ್ರಣ ಕಳೆದುಕೊಂಡು ಮೊದಲಿಗೆ ತನ್ನ ಮುಂದೆ ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಡಿವೈಡರ್ಗೆ ಡಿಕ್ಕಿಯಾಗಿ ಪಕ್ಕದಲ್ಲಿ ಬರುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಮತ್ತೊಂದು ಕಾರಿಗೂ (Brezza) ಗುದ್ದಿದೆ. ಡಿಕ್ಕಿ ರಭಸಕ್ಕೆ ಕ್ಯಾಂಟರ್ನ ಚಕ್ರಗಳು ತುಂಡಾಗಿವೆ. ಅಪಘಾತದ ಸಭಸಕ್ಕೆ XUV ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಮೃತ ಬೈಕ್ ಸವಾರನನ್ನು ಗಗನ್ (26) ಎಂದು ತಿಳಿದು ಬಂದಿದೆ. ಈತ ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದು, ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಕುಟುಂಬದಲ್ಲಿ ಅಕ್ರಂದನ ಮುಗಿಲು ಮುಟ್ಟಿದೆ. ದೇವರನಾಯಕಹಳ್ಳಿ ಗ್ರಾಮದ ಗಗನ್ ಓದಿನ ಬಳಿಕ ಹಾಪ್ ಕಾಮ್ಸ್ನಲ್ಲಿ ಕೆಲಸ ಮಾಡುತ್ತಿದ್ದ. ಕಣ್ಣು ಕಾಣದ ತಾಯಿಗೆ ಆಸರೆಯಾಗಿದ್ದ. ಪ್ರತಿದಿನ ಸಂಜೆ 5 ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದ ಗಗನ್, ಮುಂಜಾನೆ 3 ಗಂಟೆ ಸಮಯದಲ್ಲಿ ಮನೆಗೆ ಬರುತ್ತಿದ್ದ. ಕೆಲಸ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ಸಮಯದಲ್ಲಿ ಈ ಘೋರ ದುರಂತ ಸಂಭವಿಸಿದೆ.

XUV ಕಾರಿನಲ್ಲಿದ್ದ ಯುವಕರು ಕೊತ್ತನೂರಿನವರು ಎಂದು ತಿಳಿದು ಬಂದಿದೆ. ಅಶ್ವಿನ್ ನಾಯರ್ (17), ಅರ್ಹಾನ್ ಷರೀಫ್ (17), ಅಯಾನ್ ಅಲಿ (17), ಭರತ್ (18), ಎಥಾನ್ ಜಾರ್ಜ್ (17) ಹಾಗೂ ಅಜೀತ್ ಬಾಬಿ (17) ಎಂದು ತಿಳಿದು ಬಂದಿದೆ. ಮೃತರೆಲ್ಲರೂ ಆರ್ ವಿ ಹಾಗೂ ಸಿಎಮ್ ಆರ್ ಕಾಲೇಜು ವಿದ್ಯಾರ್ಥಿಗಳೆಂದು ಹೇಳಲಾಗುತ್ತಿದೆ. ಲಾಂಗ್ ಡ್ರೈವ್ಗೆಂದು ಹೊರಟ್ಟಿದ್ದ ಯುವಕರು ಹೊಸಕೋಟೆಯಿಂದ ದೇವನಹಳ್ಳಿಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಐಜಿ ಲಾಭೂರಾವ್, ಎಸ್ಪಿ ಚಂದ್ರಕಾರ್, ಡಿವೈಎಸ್ಪಿ ಮಲ್ಲೇಶ್, ಸೂಲಿಬೆಲೆ ಠಾಣೆ ಪೊಲೀಸರು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
Discover more from Coastal Times Kannada
Subscribe to get the latest posts sent to your email.








Discussion about this post