ಮಂಗಳೂರು: ನವಮಂಗಳೂರು ಬಂದರು 90,000 ಟನ್ ಕಾರ್ಗೊ ನಿರ್ವಹಣೆ ಸಾಮರ್ಥ್ಯ ಹೊಂದಿತ್ತು. ಹಾಲಿ 46 ಮಿಲಿಯನ್ ಟನ್ ಕಾರ್ಗೊ ನಿರ್ವಹಣೆ ಸಾಮರ್ಥ್ಯ ಹೊಂದಿದೆ. 2047ರೊಳಗೆ ಮಂಗಳೂರು ಬಂದರ್ನ ಸರಕು ನಿರ್ವಹಣಾ ಸಾರ್ಮರ್ಥ್ಯವನ್ನು ಕೇಂದ್ರ ಸರಕಾರದ ಅಮೃತ್ ಕಾಲ್ ಮೆರಿಟೈಮ್ ಯೋಜನೆಯಡಿ 100 ಮಿಲಿಯನ್ ಟನ್ಗೆ ಏರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರಕಾರದ ಬಂದರು ನೌಕಯಾನ ಹಾಗೂ ಜಲಸಾರಿಗೆ ಸಚಿವರಾಗಿರುವ ಸರ್ಬಾನಂದ ಸೋನಾವಾಲ್ ತಿಳಿಸಿದ್ದಾರೆ.


ಅವರು ಪಣಂಬೂರಿನ ಡಾ.ಬಿ.ಆರ್.ಅಂಬೇಡ್ಕರ್ ಸ್ಟೇಡಿಯಂನಲ್ಲಿ ಗುರುವಾರ ಆಯೋಜಿಸಿದ್ದ ನವಮಂಗಳೂರು ಬಂದರು ಪ್ರಾಧಿಕಾರ(ಎನ್ಎಂಪಿಎ)ದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನವ ಮಂಗಳೂರು ಬಂದರು ಪರಿಸರ ಸ್ನೇಹಿ, ಹಸಿರು ಬಂದರಾಗಿ ಆಧುನಿಕ ಸೌಲಭ್ಯಗಳೊಂದಿಗೆ ದೇಶದ ಆರ್ಥಿಕ ಕ್ಷೇತ್ರಕ್ಕೆ, ಕರಾವಳಿಯಲ್ಲಿ ವಾಸಿಸುತ್ತಿರುವ ನಿವಾಸಿಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಇದೀಗ ಬಂದರಿನ ಆರ್ಥಿಕ ಪ್ರಗತಿ ಹತ್ತು ಪಟ್ಟು ಹೆಚ್ಚಾಗಿದೆ. ಇದರಿಂದ ಫಲಾನು ಭವಿಗಳಿಗೆ ಹೆಚ್ಚು ಸಹಾಯವಾಗಲಿದೆ ಎಂದು ಹೇಳಿದರು. ಭಾರತ ಪ್ರಪಂಚದ ಶಕ್ತಿಶಾಲಿ ಆಗಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಪ್ರಕಾರ ದೇಶದ ಆರ್ಥಿಕ ಪ್ರಗತಿ ವೇಗವಾಗಿ ಸಾಗುತ್ತಿದೆ. ಭಾರತದ ಆರ್ಥಿಕ ಬೆಳವಣಿಗೆ ಪ್ರಪಂಚದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಎಂದು ಸಚಿವ ಸರ್ಬಾನಂದ ಸೋನಾವಾಲ್ ಹೇಳಿದರು. ಕರ್ನಾಟಕ ಸ್ವಾವಲಂಬಿ, ಶಕ್ತಿಶಾಲಿ ರಾಜ್ಯವಾಗಿದೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಆತ್ಮ ನಿರ್ಭರ ಭಾರತದ ಹಾದಿಯಲ್ಲಿ ಮಂಗಳೂರಿನ ಕೊಡುಗೆ ಮಹತ್ವದ್ದಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಸರಕಾರದ ನವೀಕರಿಸಬಹುದಾದ ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, 50ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಎನ್ಎಂಪಿಎ ಬೆಳವಣಿಗೆಯ ಹಿಂದೆ ಸಾಕಷ್ಟು ಜನರ ಕೊಡುಗೆ ಇದೆ. ಎನ್ಎಂಪಿಎ ನೇರ ಹಾಗೂ ಪರೋಕ್ಷವಾಗಿ 30 ಸಾವಿರ ಮಂದಿಗಗೆ ಉದ್ಯೋಗ ನೀಡಿದೆ ಎಂದರು.



1,507 ಕೋಟಿ ರೂ.ಗಳ 20 ಯೋಜನೆಗಳಿಗೆ ಚಾಲನೆ : ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಎನ್ ಎಂಪಿಎಯಲ್ಲಿ ಕೈಗೆತ್ತಿಕೊಂಡ 1,507 ಕೋ.ರೂ. ವೆಚ್ಚದ 19 ಮಹತ್ವದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿತು.
ಎನ್ ಎಂಪಿಎಗೆ ಆಗಮಿಸುವ ಸರಕು ವಾಹನಗಳನ್ನು 360 ಡಿಗ್ರಿಯಲ್ಲಿ ಸಂಪೂರ್ಣ ಪರಿಶೀಲಿಸುವ ಸ್ವಯಂಚಾಲಿತ ಸ್ಕ್ಯಾನಿಂಗ್ ಯಂತ್ರ ಉದ್ಘಾಟನೆ, 107 ಕೋ.ರೂ ವೆಚ್ಚದಲ್ಲಿ ಸುಸಜ್ಜಿತ ಶ್ರೀನಿವಾಸ್ ಪೋರ್ಟ್ ಆಸ್ಪತ್ರೆ ಉದ್ಘಾಟನೆ, 34 ಕೋ.ರೂ. ವೆಚ್ಚದಲ್ಲಿ ನಿರ್ಮಿಸಿದ ಎನ್ ಎಂಪಿಎ ವ್ಯಾಪ್ತಿಯಲ್ಲಿ ಮೇಲ್ದರ್ಜೆಗೇರಿದ ರಸ್ತೆ ಉದ್ಘಾಟನೆ, 300 ಟ್ರಕ್ ನಿಲುಗಡೆಗೆ ಅವಕಾಶವಿರುವ ಕೆಕೆ ಗೇಟ್ ಟ್ರಕ್ ಟರ್ಮಿನಲ್, ವಿವಿಧ ಟರ್ಮಿನಲ್ ಅಭಿವೃದ್ಧಿಗೆ ಶಂಕುಸ್ಥಾಪನೆ, ವಿವಿಧ ಸಂಸ್ಥೆಗಳಿಗೆ ಆಂಬುಲೆನ್ಸ್ ಕೊಡುಗೆ ಸಹಿತ ವಿವಿಧ ಯೋಜನೆಗಳಿಗೆ ಇದೇ ವೇಳೆ ಚಾಲನೆ ನೀಡಲಾಯಿತು.
ಇದೇ ವೇಳೆ ಎನ್ ಎಂಪಿಎಯ 50 ವರ್ಷಗಳ ಸೇವೆ, ಬೆಳವಣಿಗೆ ಹಾದಿಯ ಪಯಣದಲ್ಲಿನ ಪ್ರಮುಖ ಮೈಲಿಗಲ್ಲುಗಳು, ಅಭಿವೃದ್ಧಿ ಯೋಜನೆಗಳು ಮತ್ತು ಸಮುದ್ರಯಾನ ವಿಭಾಗದಲ್ಲಿನ ಕೊಡುಗೆಗಳ ಕುರಿತಾದ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಭಾರತ ಸರಕಾರದ ನೌಕಾ ಸಚಿವಾಲಾಯದ ಮಹಾಪ್ರಬಂಧಕ ಶ್ಯಾಮ್ ಜಗನ್ನಾಥ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಂಸದ ನಳಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ.ಅಕ್ಕರಾಜು ವೆಂಕಟರಮಣ ಸ್ವಾಗತಿಸಿದರು.
Discover more from Coastal Times Kannada
Subscribe to get the latest posts sent to your email.








Discussion about this post