ಬೆಂಗಳೂರು, ಮೇ, 15: ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮಾರ್ಗ ಮಧ್ಯದಲ್ಲಿಯೇ ಮಹಿಳಾ ನಿರ್ವಾಹಕಿಯು ಅವರಿಗೆ ಹೆರಿಗೆ ಮಾಡಿಸಿದ ಘಟನೆ ಉದಯಪುರ ಸಮೀಪದಲ್ಲಿ ನಡೆದಿದೆ. ಇದೀಗ ಮಗು ಮತ್ತು ಮಹಿಳೆ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
KA-18-F-0865 ನಂಬರ್ನ ಕೆಎಸ್ಆರ್ಟಿಸಿ ಬಸ್ನಲ್ಲಿ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಉದಯಪುರ ಸಮೀಪವಿರುವ ಕೃಷಿ ಕಾಲೇಜು ಹತ್ತಿರ ಬಸ್ ಬರುತ್ತಿದ್ದಂತೆ ಮಹಿಳೆಗೆ ಹೆರಿಗೆ ನೋವು ಇನ್ನು ಹೆಚ್ಚಾಗಿದೆ. ಇದನ್ನು ಗಮನಿಸಿದ ಮಹಿಳಾ ನಿರ್ವಾಹಕಿಯು ಬಸ್ ಅನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸುವಂತೆ ಡ್ರೈವರ್ಗೆ ಸೂಚಿಸಿದ್ದಾರೆ.
ಹತ್ತಿರ ಯಾವುದೇ ಆಸ್ಪತ್ರೆ ಇಲ್ಲದ ಕಾರಣ ಹಾಗೂ ಅವರಿಗೆ ಸಹಾಯದ ಅಗತ್ಯವಿರುತ್ತದೆ ಎಂದು ಮನಗಂಡು ತಕ್ಷಣ ಮಹಿಳಾ ನಿರ್ವಾಹಕಿ ವಸಂತಮ್ಮ ಎಂಬುವವರು ಬಸ್ ನಿಲ್ಲಿಸಿದ್ದಾರೆ. ನಂತರ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 45 ಜನ ಪ್ರಯಾಣಿಕರನ್ನು ಕೆಳಗೆ ಇಳಿಸಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಬಸ್ಸಿನಲ್ಲಿಯೇ ಹೆರಿಗೆ ಮಾಡಿಸಿದ್ದು, ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನಿಯ ಸುರಿಮಳೆಯೇ ಹರಿದುಬರುತ್ತಿದೆ.
ಹೆರಿಗೆ ನೋವಿಗೆ ಒಳಗಾಗಿದ್ದ ಮಹಿಳೆಯು ಆರ್ಥಿಕವಾಗಿ ದುರ್ಬಲಳಾಗಿದ್ದ ಕಾರಣ, ನಿಗಮದ ಚಾಲನಾ ಸಿಬ್ಬಂದಿಗಳು ಎಲ್ಲಾ ಪ್ರಯಾಣಿಕರಿಂದ ಸೇರಿ ಒಟ್ಟು 1500 ರೂಪಾಯಿಗಳನ್ನು ಸಂಗ್ರಹಿಸಿ ತುರ್ತು ಖರ್ಚಿಗಾಗಿ ಮಹಿಳೆಗೆ ನೀಡಿದ್ದಾರೆ. ಬಳಿಕ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಶಾಂತಿಗ್ರಾಮ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಈಗ ಮಹಿಳೆ ಮತ್ತು ಮಗು ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post