ಉಳ್ಳಾಲ: ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರು ಇಂದು ಕುತ್ತಾರು ಕೊರಗಜ್ಜ ಆದಿಸ್ಥಳ ಹಾಗೂ ರಕ್ತೇಶ್ವರಿ ಹಾಗೂ ಎಳ್ವೆರ್ ಸಿರಿಕುಲು ಆದಿಸ್ಥಳಗಳಿಗೆ ಕುಟುಂಬ ಸಮೇತ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕರಾವಳಿಯಲ್ಲಿ ಕಾರಣಿಕ ಶಕ್ತಿಯಾಗಿರುವ ಕೊರಗತನಿಯ(ಕೊರಗಜ್ಜ) ದೈವಕ್ಕೆ ದೇಶ ವಿದೇಶಗಳಲ್ಲಿ ಭಕ್ತರಿದ್ದಾರೆ. ಕುತ್ತಾರಿನ ಕೊರಗತನಿಯ ದೈವದ ಆದಿ ಸ್ಥಳಕ್ಕೆ ರಾಜ್ಯ, ದೇಶದ ಮೂಲೆ ಮೂಲೆಗಳಿಂದ ನಿತ್ಯವೂ ಸಾವಿರಾರು ಭಕ್ತರು ಭೇಟಿ ನೀಡಿ ಇಷ್ಟಾರ್ಥ ಸಿದ್ಧಿಗಳನ್ನ ನೆರವೇರಿಸುವಂತೆ ಪ್ರಾರ್ಥಿಸಿ, ಹರಕೆ ಹೊರುತ್ತಾರೆ.
ದೈವಶಕ್ತಿಗಳು ಎಲ್ಲರಿಗೂ ಒಳಿತು ಕರುಣಿಸಲಿ. ದೇಶಕ್ಕೆ ಬಾಧಿಸಿರುವ ಸಾಂಕ್ರಾಮಿಕ ದೂರವಾಗಲಿ. ಎಲ್ಲರೂ ಪರಿಸರದೊಂದಿಗಿನ ಕಾಳಜಿಯ ಜೊತೆಗೆ ಸುಖಕರ ಜೀವನ ನಡೆಸಲಿ. ಪ್ರಕೃತಿ ಆರಾಧನೆಯೇ ದೈವಾರಾಧನೆ ಎಂದು ತಿಮ್ಮಕ್ಕ ಹೇಳಿದರು. ತಿಮ್ಮಕ್ಕ ಅವರ ಮಗ ಉಮೇಶ್ ಮಾತನಾಡಿ, ಈ ಹಿಂದೆ ಆದಿಸ್ಥಳಕ್ಕೆ ಬಂದು ನೆರವೇರಿಸಿದ ಪ್ರಾರ್ಥನೆಗೆ ಫಲ ದೊರಕಿತ್ತು. ಇದಕ್ಕೆ ಪೂರಕವಾಗಿ ತಾಯಿ ಜೊತೆಗೆ ಬಂದಿದ್ದೇನೆ. ಅವರಿಗೂ ಇನ್ನಷ್ಟು ಶಕ್ತಿಗಳು ಆರೋಗ್ಯ ನೀಡಲಿ ಹಾಗೂ ಸರ್ವರಿಗೂ ಒಳಿತು ಕರುಣಿಸಲಿ ಎಂದರು.
ಈ ವೇಳೆ ಸಾಲುಮರದ ತಿಮ್ಮಕ್ಕ ಅವರನ್ನು ಮುನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷ ವಿಲ್ಫೆಡ್ ಡಿಸೋಜ ಸನ್ಮಾನಿಸಿದರು. ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಅಭಿವೃದ್ಧಿ ಅಧಿಕಾರಿ ರಾಜೀವ್ ನಾಯ್ಕ್, ಗ್ರಾಮಕರಣಿಕೆ ರೇಷ್ಮಾ, ಕುತ್ತಾರು ಶ್ರೀ ಕೊರಗಜ್ಜ ರಕ್ತೇಶ್ವರಿ ಎಳ್ವೆರ್ ಸಿರಿಕುಲು ದೈವಸ್ಥಾನದ ಹರೀಶ್ ಕುತ್ತಾರ್ ಹಾಗೂ ಮುಂತಾದವರು ಇದ್ದರು.
Discussion about this post