ಕೊಲಂಬೊ, ಫೆ.15: ಭಾರತ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಕೊಲಂಬೊದ ಆರ್ ಪ್ರೇಮದಾಸ್ ಮೈದಾನದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನ 27ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಹೀನಾಯ ಸೋಲನ್ನು ಕಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದದ್ದ ಟೀಮ್ ಇಂಡಿಯಾ ಇಶಾನ್ ಕಿಶ್ನ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಭಾರತ ಬೌಲಿಂಗ್ ದಾಳಿಗೆ ಸಿಲುಕಿ 114 ರನ್ಗಳಿಗೆ ಆಲೌಟ್ ಆಗಿದೆ. ಏಷ್ಯಾಕಪ್ನಲ್ಲಿ ಅರ್ಧಶತಕ ಸಿಡಿಸಿ ವಿವಾದಾತ್ಮಕ ಗನ್ ಸಂಭ್ರಮಾಚರಣೆ ಮಾಡಿದ್ದ ಶಾಹಿಬ್ಜಾದ ಫರ್ಹಾನ್ ಹಾರ್ದಿಕ್ ಎಸೆತದಲ್ಲಿ ಡಕೌಟ್ ಆಗಿ ಪೆವಿಲಿಯನ್ ಸೇರಿದರು. ಇದಲ್ಲದೇ, ಸೈಮ್ ಅಯ್ಯೂಬ್ (6), ಸಲ್ಮಾನ್ ಅಲಿ ಆಘಾ (4), ಬಾಬರ್ ಅಜಾಮ್ (5), ಶದಾಬ್ ಖಾನ್ (14), ನವಾಜ್ (4) ಭಾರತದ ದಾಳಿಗೆ ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗದೆ ಪೆವಿಲಿಯನ್ ಸೇರಿದರು. ಪಾಕ್ ಪರ ಉಸ್ಮಾನ್ ಖಾನ್ (44) ಮಾತ್ರ ಅತ್ಯಧಿಕ ಸ್ಕೋರ್ ಕಲೆಹಾಕಿದರೇ, ಶಹೀನ್ ಆಫ್ರಿದಿ ಅಜೇಯವಾಗಿ (23) ಉಳಿದರು. ಒಟ್ಟು ಮೂವರು ಫರ್ಹಾನ್, ಅಬ್ರಾರ್, ಉಸ್ಮಾನ್ ತಾರಿಖ್ ಡಕೌಟ್ ಆದರು.
ಇದರೊಂದಿಗೆ ಭಾರತ 61 ರನ್ಗಳಿಂದ ಪಂದ್ಯ ಗೆದ್ದು ಪಾಕಿಸ್ತಾನದ ಸೊಕ್ಕು ಮುರಿದಿದೆ. ಅಲ್ಲದೇ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕಳಪೆ ಆರಂಭ ಪಡೆದುಕೊಂಡಿತು. ಎರಡನೇ ಪಂದ್ಯದಿಂದ ಹೊರಗುಳಿದಿದ್ದ ಅಭಿಷೇಕ್ ಶರ್ಮಾ ಈ ಪಂದ್ಯಕ್ಕೆ ವಾಪಾಸ್ ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೊದಲ ಎಸೆತದಲ್ಲೇ ಕ್ಯಾಚೌಟ್ ಆಗಿ ಖಾತೆ ತೆರೆಯದೆ ನಿರ್ಗಮಿಸಿದರು. ಈ ವೇಳೆ ತಂಡ ಭಾರೀ ಸಂಕಷ್ಟಕ್ಕೆ ಸಿಲುಕಿತು. ಆದಾಗ್ಯೂ, ಇಶಾನ್ ಕಿಶನ್ ಅದ್ಭುತ ಪ್ರದರ್ಶನ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅವರು ತಿಲಕ್ ಜೊತೆ ಸೇರಿ 2ನೇ ವಿಕೆಟ್ಗೆ 87 ರನ್ಗಳನ್ನು ಕಲೆಹಾಕಿತು. ಸ್ಪಿನ್ನರ್ಗಳ ಆರ್ಭಟದ ನಡುವೆಯೂ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 40 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 77 ರನ್ಗಳನ್ನು ಚಚ್ಚಿ ನಿರ್ಗಮಿಸಿದರು.
ಭಾರತ 88 ರನ್ ವೇಳೆ ತನ್ನ 2ನೇ ವಿಕೆಟ್ ಕಳೆದಕೊಂಡಿತು. ಬಳಿಕ ಪಿಚ್ ಪರಿವರ್ತನೆಯಿಂದಾಗಿ ಬ್ಯಾಟರ್ಗಳ ರನ್ ಗಳಿಸಲು ಹರಸಾಹಸ ಪಡುವಂತಾಯ್ತು. ಕಿಶಾನ್ ವಿಕೆಟ್ ಬೆನ್ನಲ್ಲೆ ತಂಡದ ಸ್ಕೋರ್ 126ಕ್ಕೆ ತಲುಪಿದ್ದ ವೇಳೆ ಸತತ ಎರಡು ವಿಕೆಟ್ಗಳು ಉರುಳಿದವು. 25 ರನ್ ಗಳಿಸಿದ ತಿಲಕ್ ಬಳಿಕ ಬಂದ ಹಾರ್ದಿಕ್ ಡಕೌಟ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆ ಸೂರ್ಯ ಮತ್ತು ದುಬೆ ಜೊತೆಯಾಗಿ ತಂಡದ ಸ್ಕೋರ್ 150ರ ಗಡಿ ತಲುಪಿಸುವಲ್ಲಿ ಯಶಸ್ವಿ ಆದರು. ಸೂರ್ಯ 33 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಶಿವಂ ದುಬೆ (27) ಮತ್ತು ರಿಂಕು ಸಿಂಗ್ 170 ರ ಗಡಿ ದಾಟಿಸುವಲ್ಲಿ ಯಶಸ್ವಿ ಆದರು.
Discover more from Coastal Times Kannada
Subscribe to get the latest posts sent to your email.







Discussion about this post