ಉಳ್ಳಾಲ, ಮಾ.16 : ಚೂರಿಯಿಂದ ಇರಿಯಲ್ಪಟ್ಟು ಹತ್ಯೆಯಾದ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಉಳ್ಳಾಲ ಕೋಟೆಪುರದ ಬಾಡಿಗೆ ಮನೆಯ ಶೌಚಾಲಯದಲ್ಲಿ ಪತ್ತೆಯಾಗಿದೆ.
ಮೃತರನ್ನು ದೆಹಲಿ ಮೂಲದ ಸುಮಾರು 45 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆಯ ಜತೆಗಿದ್ದ ಅದೇ ಊರಿನ ನಯೀಮ್ (35) ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಕೋಟೆಪುರಕ್ಕೆ ಬಂದಿದ್ದ ಜೋಡಿ, ಸ್ಥಳೀಯ ಸಲೂನ್ ಮಾಲೀಕರ ಮೂಲಕ ಸಂಪರ್ಕಿಸಿ, ಹಮೀದ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಬಟ್ಟೆ ವ್ಯಾಪಾರ ನಡೆಸುತ್ತೇವೆ ಎಂದು ಅವರು ತಿಳಿಸಿದ್ದರು. ಬಟ್ಟೆಗಳು ಶೀಘ್ರದಲ್ಲೇ ಬರಲಿವೆ ಎಂದು ತಿಳಿಸಿ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಗುರುವಾರ ಸಂಜೆಯಾದರೂ ಮನೆಯಿಂದ ಯಾರೂ ಹೊರಗೆ ಬಂದಿರಲಿಲ್ಲ. ಯುವಕನೊಬ್ಬ ಅವರಿದ್ದ ಮನೆಗೆ ಹೋಗಿ ನೋಡಿದಾಗ ಶೌಚಾಲಯದಲ್ಲಿ ಮಹಿಳೆಯ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ’ ಎಂದು ಅವರು ಮಾಹಿತಿ ನೀಡಿದರು. ಸ್ಥಳಕ್ಕೆ ಉಳ್ಳಾಲ ಪೊಲೀಸರು, ವಿಧಿ ವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.



ಬಾಡಿಗೆ ಮನೆ ಮಾಲೀಕರು ಯಾವುದೇ ಗುರುತಿನ ಚೀಟಿಯನ್ನು ಪಡೆದುಕೊಳ್ಳದೇ ಇರುವುದರಿಂದ ಪೊಲೀಸರಿಗೆ ಮೃತ ಮಹಿಳೆಯ ಗುರುತು ಪತ್ತೆಹಚ್ಚುವುದು ಕಷ್ಟಕರವಾಗಿದೆ. ಸ್ಥಳದಲ್ಲಿ ಆರೋಪಿಯ ಆಧಾರ್ ಕಾರ್ಡ್ ದೊರೆತಿದ್ದು, ಇದರಲ್ಲಿ ದೆಹಲಿ ನಿವಾಸಿ ನಯೀಮ್ ಎಂಬ ದಾಖಲೆಗಳಿವೆ. ಪೊಲೀಸರು ಆರೋಪಿತನ ಮೊಬೈಲ್ ನಂಬರ್ ಪರಿಶೀಲಿಸಿದಾಗ ಅದು ಪಶ್ಚಿಮ ಬಂಗಾಳದ ಆಧಾರಗಳನ್ನು ಒಳಗೊಂಡಿದೆ. ಹಾಗಾಗಿ ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್ ಅಸಲಿಯ ಅಥವಾ ನಕಲಿಯ ಅನ್ನುವುದನ್ನು ತನಿಖೆ ನಡೆಸಬೇಕಿದೆ. ಬಾಡಿಗೆ ಮನೆ ಪಡೆಯುವ ಸಂದರ್ಭ ಆರೋಪಿತ ಜತೆಗಿರುವ ಮಹಿಳೆ ತಾಯಿಯ ಸಹೋದರಿ ಎಂದೂ ತಿಳಿಸಿದ್ದು, ಆದರೆ ಇಬ್ಬರ ವಯಸ್ಸಿನಲ್ಲಿ ದೊಡ್ಡ ವ್ಯತ್ಯಾಸ ಕಂಡುಬರುತ್ತಿಲ್ಲ ಅನ್ನುವ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಕೋಟೆಪುರ ಪರಿಸರದಲ್ಲಿ ಮೀನಿನ ತೈಲ ತೆಗೆಯುವ ಅನೇಕ ಕಾರ್ಖಾನೆಗಳಿವೆ. ಇಲ್ಲಿಗೆ ಹೊರರಾಜ್ಯಗಳ ಕಾರ್ಮಿಕರು ಅನೇಕರು ಬರುತ್ತಿರುತ್ತಾರೆ. ಬಾಡಿಗೆ ಮನೆ ಕೊಡುವವರು ಸೂಕ್ತ ದಾಖಲೆಗಳನ್ನು ಪಡೆದುಕೊಂಡೇ ಬಾಡಿಗೆ ಮನೆಯನ್ನು ನೀಡಬೇಕು ಎಂದು ಉಳ್ಳಾಲ ಠಾಣಾಧಿಕಾರಿ ಸಂದೀಪ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post