ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ಹ್ಯೂಮನಿಟೆರಿಯನ್ ದಿನದ ಪ್ರಯುಕ್ತ ಹ್ಯೂಮನಿಟೆರಿಯನ್ ಸಂಸ್ಥೆಯು ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಷ್ಟ್ರ ಮಟ್ಟದಲ್ಲಿ ನೀಡುವಂತಹ ಪ್ರಶಸ್ತಿಯಾದ ಹ್ಯೂಮನಿಟೆರಿಯನ್ ಎಕ್ಸಲೆನ್ಸ್ ಅವಾರ್ಡ್ ಅನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಗುರುಗಳಾದ ರೆ.ಫಾ.ಆದರ್ಶ್ ಜೋಸೆಫ್ ಅವರಿಗೆ ನೀಡಿ ಗೌರವಿಸಿದೆ.
ಫಾ.ಆದರ್ಶ್ ಅವರು ವಿವಿಧ ಸಂಸ್ಥೆಗಳ ಮೂಲಕ ಹಾಗೂ ವೈಯಕ್ತಿಕವಾಗಿ ಸಮಾಜಕ್ಕೆ ನೀಡಿದ ವಿವಿಧ ಸೇವೆಗಳನ್ನು ಪರಿಗಣಿಸಿ ಈ ವರ್ಷದ “ಹ್ಯೂಮನಿಟೀರಿಯನ್ ಎಕ್ಸಲೆನ್ಸ್ ಅವಾರ್ಡ್ 2024” ನೀಡಿ ಗೌರವಿಸಲಾಯಿತು. ಕೇಂದ್ರ ಮಾಜಿ ಸಚಿವ ಸಂತೋಷ್ ಬಗ್ರೋಡಿಯಾ ಹಾಗೂ ಕಿರುತೆರೆ ತಾರೆ ಸುರೇಂದ್ರ ಪಾಲ್ ಅವರಿಂದ ದೆಹಲಿಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಕೋವಿಡ್ 19ರ ಸಂದರ್ಭದಲ್ಲಿ ನೆಲ್ಯಾಡಿ, ಕಡಬದ ಹಲವು ಗ್ರಾಮ ಮಟ್ಟದಲ್ಲಿ ಮಾಡಿದ ಸಮಾಜಸೇವೆ, ತನ್ನ ವೈಯಕ್ತಿಕ ವಾಹನದಲ್ಲೇ ನೂರಕ್ಕೂ ಅಧಿಕ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಮತ್ತು ಕೋವಿಡ್ ಸೆಂಟರ್ಗಳಿಗೆ ಉಚಿತವಾಗಿ ರವಾನೆ ಮಾಡುವುದರ ಮೂಲಕ ಹಲವಾರು ಜನರ ಪ್ರಾಣ ಉಳಿಸುವಲ್ಲಿ ಫಾ. ಆದರ್ಶ್ ಜೋಸೆಫ್ ಅವರು ಯಶಸ್ವಿಯಾಗಿದ್ದರು.
ಮಾತ್ರವಲ್ಲದೆ ಈ ಸಮಯದಲ್ಲಿ ಆಹಾರ ಕಿಟ್ ವಿತರಣೆ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುವ ಇವರು ಜಾತಿ, ಧರ್ಮ ವ್ಯತ್ಯಾಸವಿಲ್ಲದೇ ಸಮಾಜದ ಎಲ್ಲಾ ವರ್ಗದ ಜನರಿಗೆ ನೆರವಾಗಿದ್ದಾರೆ. ಅಲ್ಲದೆ, ಸಮಾಜದಲ್ಲಿ ಶಾಂತಿ ಸಾಮರಸ್ಯ ಬೆಳೆಸಬೇಕೆಂಬ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಮಾಜಕ್ಕೆ ಸಾರುವಲ್ಲಿಯೂ ಪ್ರಮುಖ ಪಾತ್ರ ವಹಿಸಿರುವ ಮಾನವೀಯ ಸೇವೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಸ್ತುತ ಬೆಳ್ತಂಗಡಿ ಧರ್ಮಪ್ರಾಂತ್ಯದ ಅಧೀನದಲ್ಲಿ ಬರುವ ಸುಳ್ಯ ತಾಲೂಕಿನ ಗುತ್ತಿಗಾರು ಹಾಗೂ ಕಡಬ ತಾಲೂಕಿನ ನೆಟ್ಟಣ ಚರ್ಚಿನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಫಾ.ಆದರ್ಶ್ ಅವರು ಧರ್ಮಪ್ರಾಂತ್ಯದ ಕೆ.ಎಸ್.ಎಂ.ಸಿ ಎ ಸಂಘಟನೆಯ ನಿರ್ದೇಶಕ ರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post