ಮಂಗಳೂರು, ಸೆ.19 : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕೆ ಬಂದರಿನ ಧಕ್ಕೆ ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಸಚಿವರಾದ ಯು ಟಿ ಖಾದರ್, ಕಾಂಗ್ರೆಸ್ ಮುಖಂಡರಾದ ಪದ್ಮರಾಜ್, ಇನಾಯತ್ ಅಲಿ, ದಕ್ಷಿಣ ಕನ್ನಡ ಜಿಲ್ಲಾ ಟ್ರಾಲ್ ಬೋಟ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷರಾದ ಚೇತನ್ ಬೆಂಗ್ರೆ, ಮೋಹನ್ ಬೆಂಗ್ರೆ ಮತ್ತಿತರರ ಸ್ಥಳೀಯ ಮುಖಂಡರು ಇದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಧಕ್ಕೆ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸುತ್ತಾಡಿದ ಸಿಎಂ, ಸಮುದ್ರದಿಂದ ಬಂದಿದ್ದ ತಾಜಾ ಮೀನುಗಳ ವಹಿವಾಟು ಹಾಗೂ ಮೀನುಗಾರಿಕಾ ಬೋಟ್ಗಳನ್ನು ವೀಕ್ಷಿಸಿದರು. ಈ ವೇಳೆ ಸ್ಥಳದಲ್ಲಿದ್ದ ಮೀನುಗಾರರು ಮುಖ್ಯಮಂತ್ರಿಗಳಿಗೆ ಜೈಕಾರ ಕೂಗಿದರು. ಬಳಿಕ ಮೀನುಗಾರರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ ಡಿ.ಕೆ. ಶಿವಕುಮಾರ್, ಅವರ ಸಮಸ್ಯೆಗಳನ್ನು ಆಲಿಸಿದರು.
ಸಿಎಂ ಭೇಟಿ ಹಿನ್ನೆಲೆ ಮಂಗಳೂರು ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ: ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಧಕ್ಕೆ ಹಳೆ ಬಂದರು ಪ್ರದೇಶಕ್ಕೆ ಭೇಟಿ ನೀಡಿದರು. ಸಿಎಂ ಭೇಟಿ ಹಿನ್ನೆಲೆಯಲ್ಲೇ ಧಕ್ಕೆಯಲ್ಲಿ ಮೀನುಗಾರಿಕೆ ವ್ಯವಹಾರ ಚಟುವಟಿಕೆ ಸ್ಥಗಿತಗೊಳಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಲ್ಲಿ ಬರುವ ವೇಳೆ ಮೀನುಗಾರಿಕೆ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಇದನ್ನು ಅಧಿಕಾರಿಗಳು ಮಾಡಿದ್ದಾರೋ, ಪೊಲೀಸ್ನವರು ಮಾಡಿದ್ದಾರೋ ಅದರ ಬಗ್ಗೆ ಸಮಾಧಾನ ಇಲ್ಲ. ನಾನು ಜಿಲ್ಲಾಧಿಕಾರಿ ಮತ್ತು ಕಮಿಷನರ್ಗೆ ತನಿಖೆ ಮಾಡಿ ವರದಿ ನೀಡಲು ಹೇಳಿದ್ದೇನೆ. ಅಧಿಕಾರಿಗಳು ಮಾಡಿದ್ದರೆ ಅವರನ್ನು ಇವತ್ತೇ ಅಮಾನತು ಮಾಡಲಾಗುವುದು.



ವ್ಯವಹಾರ ಚಟುವಟಿಕೆ ನಡೀತಾ ಇರಬೇಕು. ನಾನು ಸಮಸ್ಯೆ ಕೇಳಲು ಬಂದಿರುವುದು. ರಾಜ್ಯದ ವಿವಿಧ ಮೂಲೆ, ಬೇರೆ ರಾಜ್ಯಗಳಾದ ಆಂಧ್ರ, ತಮಿಳುನಾಡು, ಕೇರಳ ಎಲ್ಲ ಕಡೆಯಿಂದ ಬರುತ್ತಾರೆ. ವ್ಯಾಪಾರ ವಹಿವಾಟು ಮಾಡುತ್ತಾರೆ. ಸ್ವಲ್ಪ ತಡ ಆದರೂ ಆ ಮೀನು ಮಾರುವವರಿಗೆ ತೊಂದರೆ ಆಗುತ್ತದೆ. ಹಿಂದೆ ಕೂಡ ಕಾಂಗ್ರೆಸ್ ಅಧ್ಯಕ್ಷ ಆಗಿದ್ದಾಗ ಮೀನುಗಾರ ಸಮಸ್ಯೆ ಆಲಿಸಿದ್ದೇನೆ. ಅದಕ್ಕೊಂದು ಶಾಶ್ವತ ಪರಿಹಾರ ಬೇಕಿದೆ. ಅದಕ್ಕಾಗಿ ಮೀನುಗಾರಿಕೆ, ಮೀನು ಹಿಡಿಯುವವರಿಗೆ, ಮಾರುವರಿಗೆ ಮತ್ತು ಜೆಟ್ಟಿಗಳ ಸಮಸ್ಯೆ ತಿಳಿಯಲು ನಾನೇ ಖುದ್ದು ಬಂದಿದ್ದೇನೆ. ಅಸೋಸಿಯೇಷನ್ ಅವರು ಕೂಡ ಭೇಟಿ ಮಾಡಿ ಮನವಿ ನೀಡಿದ್ದಾರೆ ಎಂದರು.
ಇಲ್ಲಿ ಕೆಲವರು ರಸ್ತೆ ಬ್ಲಾಕ್ ಮಾಡಿರುವುದು ಮೊದಲಾದ ಅಡೆತಡೆ ಮಾಡಿದ್ದಾರೆ ಎಂಬ ದೂರು ಇದೆ. ಯಾರು ಎಷ್ಟೇ ದೊಡ್ಡ ಜನ ಆಗಿದ್ದರೂ ಮುಲಾಜಿಲ್ಲ. ನಮ್ಮ ಸರಕಾರ ಕ್ರಮ ವಹಿಸಲಿದೆ. ಧಕ್ಕೆಯಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಬೇಕು. ಸುರಕ್ಷತೆ ಬೇಕು. ಸಣ್ಣ ಬೋಟ್ನ ಹಲವರಿಗೆ ಅನುಕೂಲ ಬೇಕು. ಮೀನುಗಾರಿಕೆ ಆರ್ಥಿಕವಾದ ದೊಡ್ಡ ಶಕ್ತಿ. ಪ್ರೋತ್ಸಾಹ ನೀಡಬೇಕು. ಶೈಕ್ಷಣಿಕವಾಗಿ ಒತ್ತು ನೀಡುವ ಸಲುವಾಗಿ ಮೀನುಗಾರಿಕೆ ಕಾಲೇಜಿನ ಸಾಮರ್ಥ್ಯ ಹೆಚ್ಚಿಸಲಾಗಿದೆ. ಕಾರವಾರ ಸೇರಿದಂತೆ ಎಲ್ಲೆಲ್ಲಾ ಮೀನುಗಾರಿಕೆ ವಹಿವಾಟು ನಡೆಯುತ್ತಿದೆ ಅಲ್ಲಿಂದ ವರದಿ ತರಿಸಿ ಅಗತ್ಯ ಕ್ರಮ ವಹಿಸಲಾಗುವುದೂ ಎಂದು ಮುಖ್ಯಮಂತ್ರಿ ಹೇಳಿದರು.

35 ವರ್ಷಗಳಿಂದ ಅಳಿವೆ ಬಾಗಿಲಿಗೆ ಹೂಳೆತ್ತಿಲ್ಲ. ಅಪಾಯಕಾರಿ ಆಗಿದೆ ಎಂಬ ಬಗ್ಗೆ ಸುದ್ದಿಗಾರ ಪ್ರಶ್ನೆಗೆ, ಇಲ್ಲಿ ಕೆಲವರು ಹೇಳುವ ಪ್ರಕಾರ ಡ್ರೆಜಿಂಗ್ ಮಾಡಿ ಹೂಳು ಸಮುದ್ರಕ್ಕೆ ಬಿಡಬೇಕು. ಇನ್ನು ಕೆಲವರು ಡ್ರೆಜಿಂಗ್ ಮಾಡಿ ಪ್ರದೇಶವನ್ನು ಜಾಸ್ತಿ ಮಾಡಬೇಕು ಅಂತಾರೆ. ಈ ಬಗ್ಗೆ ಕೇಂದ್ರ ಸರಕಾರದ ತಾಂತ್ರಿಕ ಸಮಿತಿ ಇದೆ ಅಂತೆ. ಅವರು ಬಂದು ಸಲಹೆ ನೀಡಬೇಕಂತೆ. ಆ ಬಗ್ಗೆ ಕೇಳಿ ಕ್ರಮ ವಹಿಸಲಾಗುವುದು. ಸರಕಾರವೇ ಸ್ವಂತ ಡ್ರೆಜಿಂಗ್ ಯಂತ್ರ ಖರೀದಿ ಮಾಡುವುದೋ ಅಥವಾ ಲೀಸ್ಗೆ ಪಡೆಯುವುದಾ ಎಂದು ಸದ್ಯವೇ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಹೇಳಿದರು.
Discover more from Coastal Times Kannada
Subscribe to get the latest posts sent to your email.







Discussion about this post