ಮಂಗಳೂರು, ಅ.18 : ನಕಲಿ ಕಂಪನಿಗಳನ್ನು ಸೃಷ್ಟಿಸಿ ಕೇಂದ್ರ ಸರಕಾರದ MSME ಸಾಲ ಯೋಜನೆಗಳ ಹೆಸರಲ್ಲಿ ನಗರದ ಮಲ್ಲಿಕಟ್ಟೆ ಎಸ್ ಬಿಐ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚನೆ. ಬ್ಯಾಂಕ್ ಅಧಿಕಾರಿಗಳ ಆಂತರಿಕ ತನಿಖೆಯಲ್ಲಿ ಕೃತ್ಯ ಬೆಳಕಿಗೆ ಬರುತ್ತಲೇ ಸೆ.16ರಂದು ಕದ್ರಿ ಠಾಣೆಗೆ ದೂರು ನೀಡಲಾಗಿತ್ತು. ಆನಂತರ, ಪ್ರಕರಣ ಮಂಗಳೂರು ಸಿಸಿಬಿಗೆ ವರ್ಗಾಯಿಸಲ್ಪಟ್ಟು ಎಲ್ಲ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬ್ಯಾಂಕ್ ಅಧಿಕಾರಿಯೂ ಅರೆಸ್ಟ್ ಆಗಿದ್ದು ಜೈಲು ಸೇರಿದ್ದಾನೆ. ಮಹಮ್ಮದ್ ಮುಸ್ತಫಾ, ಫಾತಿಮಾ ಶಬ್ನಮ್, ಮುನೀರ್ ಕಡಮನ್, ಸಫಿಯಾ ಮತ್ತು ಬ್ಯಾಂಕ್ ಅಧಿಕಾರಿ ಅಭಿಷೇಕ್ ನಂದಾ ಆರೋಪಿಗಳು.
ಪುತ್ತೂರು ಮೂಲದ ಪ್ರಸಕ್ತ ಜೆಪ್ಪುವಿನಲ್ಲಿ ನೆಲೆಸಿರುವ ಮಹಮ್ಮದ್ ಮುಸ್ತಫಾ ಎಂಬಾತ ಎಂ.ಎಸ್ ಎಂಟರ್ ಪ್ರೈಸಸ್ ಮತ್ತು ಫ್ಯೂಶನ್ ಡಾಟ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ಸಣ್ಣ ಕೈಗಾರಿಕೆಯನ್ನು ಆರಂಭಿಸುವುದಾಗಿ ಹೇಳಿ 2023ರ ಆಗಸ್ಟ್ 8ರಂದು ಬ್ಯಾಂಕಿಗೆ ಸಾಲದ ಅರ್ಜಿ ಸಲ್ಲಿಸಿದ್ದರು. ಬ್ಯಾಂಕಿನ ರಿಲೇಶನ್ ಶಿಪ್ ಮ್ಯಾನೇಜರ್ ಆಗಿದ್ದ ಅಭಿಷೇಕ್ ನಂದಾ, ಅರ್ಜಿಗಳನ್ನು ಪರಿಶೀಲಿಸಿ, ಕೈಗಾರಿಕಾ ಘಟಕವನ್ನೂ ನೋಡಿದ್ದಾಗಿ ವರದಿ ನೀಡಿದ್ದರಿಂದ 2023ರ ಸೆ.13ರಂದು ಎಸ್ ಬಿಐ ಬ್ಯಾಂಕಿನ ಮಲ್ಲಿಕಟ್ಟೆ ಶಾಖೆಯಿಂದ ಎಂಎಸ್ ಎಂಟರ್ ಪ್ರೈಸಸ್ ಕಂಪನಿಯ ಪ್ರೊಪ್ರೈಟರ್ ಮಹಮ್ಮದ್ ಮುಸ್ತಫಾ ಖಾತೆಗೆ 75 ಲಕ್ಷ ಸಾಲ ಮಂಜೂರಾಗಿತ್ತು. ಮರು ದಿನ ಆತನದ್ದೇ ಇನ್ನೊಂದು ಸಾಲದ ಖಾತೆಗೆ 55 ಲಕ್ಷ ಸಾಲ ಮೊತ್ತ ಪಾವತಿಯಾಗಿತ್ತು.
ಒಂದು ವರ್ಷ ಕಳೆದರೂ ಮರುಪಾವತಿ ಮಾಡದೇ ಇದ್ದುದರಿಂದ ಬ್ಯಾಂಕ್ ಅಧಿಕಾರಿಗಳು ಪ್ರಶ್ನಿಸಿದಾಗ, ಆರೋಪಿಗಳು ಕಂಪನಿಯನ್ನು ದಿವಾಳಿಯೆಂದು ತೋರಿಸಿದ್ದರು. ಬ್ಯಾಂಕಿನ ಚೀಫ್ ಮ್ಯಾನೇಜರ್ ಸೌರಭ್ ಕುಮಾರ್ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಿದಾಗ, ಸಾಲದ ಹಣವನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸದೇ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ ದುರುಪಯೋಗ ಮಾಡಿರುವುದು ಪತ್ತೆಯಾಗಿತ್ತು. ಮೂರನೇ ಆರೋಪಿ ಫಾತಿಮಾ ಶಬನಮ್ ಖಾತೆಗೆ 55 ಲಕ್ಷ, ಫ್ಯೂಶನ್ ಡಾಟ್ ಎಂಟರ್ ಪ್ರೈಸಸ್ ಸಂಸ್ಥೆಯ ಹೆಸರಿನಲ್ಲಿ ಮೊಹಮ್ಮದ್ ಮುಸ್ತಫಾ ಖಾತೆಗೆ 32 ಲಕ್ಷ ವರ್ಗಾವಣೆಯಾಗಿತ್ತು. ಅಲ್ಲದೆ, 5ನೇ ಆರೋಪಿ ಮುನೀರ್ ಕಡಮನ್ ಮತ್ತು ಆರನೇ ಆರೋಪಿ ಸಫಿಯಾ ಖಾತೆಗೆ 14 ಲಕ್ಷ ಮತ್ತು 20 ಲಕ್ಷ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ಇಲ್ಲಿ ಸಫಿಯಾ ಮತ್ತು ಶಬನಮ್ ತಾಯಿ ಮಗಳಾಗಿದ್ದು ಫ್ರಾಡ್ ಮಾಡಿ ಜೈಲು ಸೇರಿದ್ದಾರೆ.
ಅಲ್ಲದೆ, 7ನೇ ಆರೋಪಿ ಬ್ಯಾಂಕಿನ ರಿಲೇಶನ್ ಶಿಪ್ ಮ್ಯಾನೇಜರ್ ಆಗಿದ್ದ ಅಭಿಷೇಕ್ ನಂದಾನಿಗೆ ಸೇರಿದ ಮೈಸೂರಿನ ಐಸಿಐಸಿಐ ಬ್ಯಾಂಕ್ ಖಾತೆಗೂ ದೊಡ್ಡ ಮೊತ್ತದ ಹಣ ಪಾವತಿಯಾಗಿರುವುದು ಪತ್ತೆಯಾಗಿತ್ತು. ಇದರಂತೆ, ನಕಲಿ ಕಂಪೆನಿಗಳ ಹೆಸರಲ್ಲಿ ಬ್ಯಾಂಕ್ ಮ್ಯಾನೇಜರನ್ನೇ ಮುಂದಿಟ್ಟು 1.30 ಕೋಟಿ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ಪಡೆದು ಮೋಸ ಎಸಗಿರುವ ಬಗ್ಗೆ ಬ್ಯಾಂಕಿನ ಮುಖ್ಯ ಮ್ಯಾನೇಜರ್ ಸೌರಭ್ ಕುಮಾರ್ ಕದ್ರಿ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿತ್ತು.
ಸಿಸಿಬಿ ಪೊಲೀಸರು ತನಿಖೆ ನಡೆಸಿ ಬ್ಯಾಂಕ್ ಅಧಿಕಾರಿ ಸೇರಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ಫೇಕ್ ಕಂಪನಿಗಳನ್ನು ಸೃಷ್ಟಿಸಿ ಸಾಲ ತೆಗೆಸಿಕೊಡುವುದನ್ನೇ ವೃತ್ತಿ ಮಾಡಿಕೊಂಡಿರುವ ಆಶಿಕ್ ಎಂಬಾತನೇ ಇದರ ರೂವಾರಿಯಾಗಿದ್ದು ಆತ ತಲೆಮರೆಸಿಕೊಂಡಿದ್ದಾನೆ. ಎಸ್ ಬಿಐ ಮಲ್ಲಿಕಟ್ಟೆ ಶಾಖೆಯಲ್ಲಿ ಇಂತಹದ್ದೇ ಹಲವಾರು ಬ್ಲಂಡರ್ ಸಾಲ ವಿತರಣೆಯಾಗಿದ್ದು, ಅಭಿಷೇಕ್ ಮೂಲಕ ನೀಡಿರುವ ಎಲ್ಲ ಸಾಲಗಳನ್ನೂ ತನಿಖೆಗೆ ಒಳಪಡಿಸ್ತಿರೋದಾಗಿ ಪೊಲೀಸರು ತಿಳಿಸಿದ್ದಾರೆ.
ಸದ್ರಿ ಪ್ರಕರಣದಲ್ಲಿ ಆರೋಪಿಗಳು ಒಬ್ಬರಿಗೊಬ್ಬರು ಸಂಬಂಧಿಕರೇ ಆಗಿದ್ದಾರೆ. ಆಶಿಕ್ ಅತ್ತಾವರದಲ್ಲಿ ಮೈಲ್ಸ್ ಆಫ್ ಫೈಲ್ಸ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ಕಚೇರಿ ಹೊಂದಿದ್ದು, ಅದನ್ನೇ ನಕಲಿ ಕಂಪನಿಯನ್ನಾಗಿ ತೋರಿಸಿ ತನ್ನ ಪತ್ನಿಯನ್ನೇ ಪ್ರೊಪ್ರೈಟರ್ ಎಂದು ಬ್ಯಾಂಕಿಗೆ ನಂಬಿಸಿ ಸಾಲ ಪಡೆದಿದ್ದಾನೆ. ಇದೇ ರೀತಿ ಹಲವಾರು ಮಂದಿಗೆ ಕೇಂದ್ರ ಸರಕಾರದ ಮುದ್ರಾ ಇನ್ನಿತರ ಯೋಜನೆಗಳಿಂದ ಸಾಲ ತೆಗೆಸಿಕೊಟ್ಟು ಕೋಟ್ಯಂತರ ರೂಪಾಯಿ ಗುಳುಂ ಮಾಡಿದ್ದಾನೆ ಎನ್ನುವ ಮಾಹಿತಿ ಪೊಲೀಸರಿಂದ ತಿಳಿದುಬಂದಿದೆ. ಯಾವುದೇ ಅಡಮಾನ ಇಲ್ಲದೆ ಸಾಲ ಒದಗಿಸುವ ಇಂತಹ ಯೋಜನೆಗಳನ್ನು ದುರುಪಯೋಗ ಮಾಡುವುದನ್ನೇ ಈ ಖದೀಮರು ಕಸುಬು ಮಾಡಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post