ಪಡುಬಿದ್ರಿ, ಕಾಪು : ತನ್ನ ಬಡತನದ ಮಧ್ಯೆ ಇನ್ನೊಬ್ಬರ ನೋವಿಗೆ ಮಿಡಿಯುವ ರವಿ ಕಟಪಾಡಿ ಈ ಭಾರಿ ವಿಭಿನ್ನ ರೀತಿಯ ಹಾಲಿವುಡ್ ಚಿತ್ರದ ಡೆಮೊನ್ ವೇಷ ಧರಿಸಿದ್ದಾರೆ ವೇಷ ಧರಿಸಿ ಸಂಗ್ರಹವಾದ ಹಣ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ರವಿ ಕಟಪಾಡಿ ಈ ಭಾರಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶಿಷ್ಟ ರೀತಿಯ ವೇಷ ಧರಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ ಮತ್ತು ಕೊರಗಜ್ಜ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಕೋಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಿಂದ ಚಾಲನೆ ನೀಡಲಾಯಿತು.
ಹೈದರಬಾದ್, ಮಲ್ಪೆ ಸಹಿತ ವಿವಿಧ ಕಡೆಗಳ ಕಲಾವಿದರು ಸೇರಿ ಕಳೆದ ಮೂರು ತಿಂಗಳಿನಿಂದ ಈ ಕೆಲಸದಲ್ಲಿ ತೊಡಗಿಸಿ ಡೆಮೋನ್ ವೇಷಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಅಮೆರಿಕಾದಿಂದ ತರಿಸಿದ ವಿವಿಧ ರೀತಿಯ ಸಲಕರಣೆಗಳನ್ನು ಬಳಸಿಕೊಂಡು ವೇಷ ಸಿದ್ಧ ಪಡಿಸಲಾಗಿದೆ. ಇದಕ್ಕಾಗಿ ರವಿ ಕಟಪಾಡಿ ಮಾತನಾಡಿ, ಕಳೆದ ಏಳು ವರ್ಷಗಳಿಂದ ವೇಷ ಧರಿಸಿ ಒಟ್ಟು 89.75ಲಕ್ಷ ರೂ. ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿದ್ದು, ಈ ಹಣವನ್ನು ಈವರೆಗೆ ಒಟ್ಟು 66 ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ವಿನಿಯೋಗಿಸಲಾಗಿದೆ. ಈ ಬಾರಿ 10ಲಕ್ಷ ರೂ. ಹಣ ಸಂಗ್ರಹಿಸುವ ಮೂಲಕ ಒಟ್ಟು ಒಂದು ಕೋಟಿ ರೂ. ಗುರಿ ತಲುಪುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಏಳು ವರ್ಷಗಳ ಹಿಂದೆ ಅನಾರೋಗ್ಯ ಪೀಡಿತರಾದ ಬಡ ಮಗುವಿನ ಕರುಣಾಜನಕ ಸ್ಥಿತಿಯನ್ನು ನೋಡಿ ಈ ಮಗುವಿಗೆ ಏನಾದರೂ ಸಹಾಯ ಮಾಡಬೇಕು ಎನ್ನುವ ನಿಟ್ಟಿನಲ್ಲಿ ವೇಷವನ್ನು ಧರಿಸಿ ಹಣ ಸಂಗ್ರಹಿಸಿದೆ. ಬಡವರಿಗೆ ಸಹಾಯ ಮಾಡಬೇಕು ತಂದೆಯವರ ಮಾತಿನಂತೆ ಈ ಕಾರ್ಯಕ್ಕೆ ಇಳಿದಿದ್ದೇನೆ ಎನ್ನುತ್ತಾರೆ ರವಿ ಕಟಪಾಡಿ.
ರವಿ ಕಟಪಾಡಿಯವರ ವೇಷದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸ್ಮಾರ್ಟ್ ಆರ್ಟ್ ಸಂಸ್ಥೆಯ ಮುಖ್ಯಸ್ಥ ಆಕ್ಷಯ್ ಮಾತನಾಡಿ ಇದಕ್ಕಾಗಿ ನಾವು ಎರಡು ತಿಂಗಳಿನಿಂದ ಪ್ರಯತ್ನ ಪಟ್ಟಿದ್ದೇವೆ. ದೇಹದ ಚರ್ಮಕ್ಕೆ ಹಾನಿಕಾರಕವಲ್ಲದ ವಸ್ತುಗಳನ್ನು ಬಳಕೆ ಮಾಡಿದ್ದೇವೆ. ಸಿಲಿಕಾನ್ನಂತಹ ವಸ್ತುಗಳನ್ನು ಉಪಯೋಗಿಸಿದ್ದೇವೆ. ಇದಕ್ಕೆ ವೇಷಕ್ಕೆ ಸುಮಾರು 1.5 ಲಕ್ಷ ರೂ. ಖರ್ಚಾಗಿದೆ. ಬಾಹುಬಳಿ ಚಿತ್ರದ ಪ್ರಮುಖ ಕಲಾವಿದರಾದ ಹೈದರಬಾದ್ನ ಅವಿನಾಶ್ ಅವರು ಈ ವೇಷದ ಪ್ರಮುಖ ಮೋಲ್ಡ್ ಸಿದ್ಧತೆ ನಡೆಸಿದ್ದಾರೆ. ಕಟಪಾಡಿಯ ಒಟ್ಟು ಏಳು ಮಂದಿ ಕಲಾವಿದರು ವೇಷಕ್ಕಾಗಿ ಕಳೆದ ಒಂದು ತಿಂಗಳುಗಳಿಂದ ಸಿದ್ಧತೆ ನಡೆಸಿದ್ದಾರೆ.
Discussion about this post