ಸುಳ್ಯ: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯ ಹೇಳಿಕೆ ಪಡೆಯಲು ಸುಳ್ಯ ಆಸ್ಪತ್ರೆಗೆ ಬಂದ ಕೇರಳದ ಮ್ಯಾಜಿಸ್ಟ್ರೇಟ್ಗೆ ಅಗೌರವ ತೋರಿರುವ ಆರೋಪದ ಹಿನ್ನೆಲೆ ಸ್ವತಃ ನ್ಯಾಯಾಧೀಶರೇ ಪೊಲೀಸರಿಗೆ ದೂರು ನೀಡಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಕೇರಳದ ಕಾಸರಗೋಡಿನ ದೇಲಂಪಾಡಿಯ ಯುವತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿತ್ತು. ಆ ಯುವತಿಯ ಹೇಳಿಕೆ ಪಡೆಯಲು ಆದೂರು ಪೊಲೀಸ್ ಅಧಿಕಾರಿಗಳ ಜತೆ ತಾವು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದೆವು. ಈ ವೇಳೆ ಆಸ್ಪತ್ರೆಯ ಇಬ್ಬರು ವೈದ್ಯರು ತಮ್ಮೊಂದಿಗೆ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ಸುಳ್ಯ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ? ದೂರಿನಲ್ಲಿ ಏನಿದೆ?: ಕೇರಳ ಹೈಕೋರ್ಟ್ ಆದೇಶದ ಪ್ರಕಾರ ಆತ್ಮಹತ್ಯೆಗೆ ಯತ್ನಿಸಿದವರ ಹೇಳಿಕೆಯನ್ನು ಸ್ವತಃ ಜಿಲ್ಲಾ ನ್ಯಾಯಾಧೀಶರೇ ಸ್ಥಳಕ್ಕೆ ಹೋಗಿ ಪಡೆಯಬೇಕಿರುವುದರಿಂದ ಮ್ಯಾಜಿಸ್ಟ್ರೇಟ್ ಅಬ್ದುಲ್ ಬಾತಿಷ್ ಅವರು ಸೆ.21ರಂದು ರಾತ್ರಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದರು.
ತಾವು ಆಸ್ಪತ್ರೆಗೆ ಬರುವ ಬಗ್ಗೆ ಈ ಮೊದಲೇ ಮಾಹಿತಿ ನೀಡಿದ್ದರೂ, ವೈದ್ಯರು ತನಗೆ ಮಾಹಿತಿ ನೀಡದೇ ಅಗೌರವದಿಂದ ನಡೆಸಿಕೊಂಡಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ಅಬ್ದುಲ್ ಬಾತಿಷ್ ಸುಳ್ಯ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Discover more from Coastal Times Kannada
Subscribe to get the latest posts sent to your email.







Discussion about this post