ಉಡುಪಿ, ಸೆ.27 : ಎ.ಕೆ.ಎಂ.ಎಸ್ ಖಾಸಗಿ ಬಸ್ ಮಾಲೀಕ ಮತ್ತು ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದ ಸೈಫುದ್ದೀನ್ ಎಂಬವರನ್ನು ಮಲ್ಪೆ ಬಳಿಯ ಕೊಡವೂರಿನ ಮನೆಯಲ್ಲಿ ಆಗಂತುಕರು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಮಧ್ಯಾಹ್ನ ವೇಳೆಗೆ ಸೈಫುದ್ದೀನ್ ಮನೆಗೆ ಬಂದಿದ್ದಾಗಲೇ ಕಾರಿನಲ್ಲಿ ಬಂದಿದ್ದ ತಂಡವೊಂದು ಏಕಾಏಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಹರಿರಾಮ್ ಶಂಕರ್, ಮೂವರು ಕೃತ್ಯದಲ್ಲಿ ಭಾಗಿಯಾದ ಮಾಹಿತಿ ಇದೆ, ಯಾಕಾಗಿ, ಯಾರು ಕೃತ್ಯ ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆ ಬಳಿಕ ತಿಳಿಯಲಿದೆ, ನಾವು ಆರೋಪಿಗಳ ಪತ್ತೆಗಾಗಿ ತಂಡ ರಚಿಸುತ್ತೇವೆ ಎಂದಿದ್ದಾರೆ.
ಈ ಬಗ್ಗೆ ಸೈಫುದ್ದೀನ್ ಪುತ್ರ ದೂರು ನೀಡಿದ್ದು, ಇಬ್ಬರ ಬಗ್ಗೆ ಉಲ್ಲೇಖಿಸಿದ್ದಾರೆ. ಸೈಫುದ್ದೀನ್ ಸ್ನೇಹಿತರಾದ ಉಡುಪಿ ಕುಕ್ಕಿಕಟ್ಟೆಯ ನಿವಾಸಿ ಫೈಜಲ್ ಖಾನ್ ಮನೆಗೆ ಬಂದು ಬಸ್ ವಿಚಾರದ ಬಗ್ಗೆ ಮಾತನಾಡಲು ಕರೆದಿದ್ದ. ಹೀಗಾಗಿ ಫೈಜಲ್ ನ ಕಾರಿನಲ್ಲಿ ಸೈಫುದ್ದೀನ್ ತೆರಳಿದ್ದರು. ಮಣಿಪಾಲದಿಂದ ಕೊಡವೂರಿಗೆ ತೆರಳಿ, ಅಲ್ಲಿ ಫೈಜಲ್ ಖಾನ್ ಮತ್ತು ದೊಡ್ಡಣಗುಡ್ಡೆ ನಿವಾಸಿ ಶರೀಫ್ ಮತ್ತು ಇತರರು ಸೇರಿ ಸೈಫುದ್ದೀನ್ ಮೇಲೆ ಮಚ್ಚಿನಿಂದ ತಲೆಗೆ ಮತ್ತು ಬೆನ್ನಿಗೆ ಕೊಚ್ಚಿ ಕೊಲೆ ಮಾಡಿ, ಕಾರಿನಲ್ಲಿ ಪರಾರಿಯಾಗಿದ್ದಾರೆ.
ಘಟನೆ ಬೆನ್ನಲ್ಲೇ ಮಲ್ಪೆ ಪೊಲೀಸರು ಮತ್ತು ಉಡುಪಿ ಪೊಲೀಸರು ನಾಕಾಬಂದಿ ಮಾಡಿ ತಪಾಸಣೆ ಚುರುಕುಗೊಳಿಸಿದ್ದಾರೆ. ಸೈಫುದ್ದೀನ್ ಉಡುಪಿ ನಗರ ಭಾಗದಲ್ಲಿ ಸಂಚರಿಸುತ್ತಿದ್ದ ಎಕೆಎಂಎಸ್ ಹೆಸರಿನ ಬಸ್ಸನ್ನು ನಡೆಸುತ್ತಿದ್ದರು. ಮಲ್ಪೆ ಠಾಣೆಯಲ್ಲಿ ರೌಡಿಶೀಟರ್ ಎನ್ನಲಾಗುತ್ತಿದ್ದು ಹಳೆ ದ್ವೇಷದಿಂದಲೇ ಕೃತ್ಯ ಎಸಗಿರುವ ಅನುಮಾನ ಇದೆ. ಆತ್ರಾಡಿ ನಿವಾಸಿಯಾಗಿರುವ ಸೈಫುದ್ದೀನ್ ಇತ್ತೀಚೆಗಷ್ಟೇ ಮಲ್ಪೆಯಲ್ಲಿ ಹೊಸ ಮನೆ ಖರೀದಿಸಿದ್ದರು. ಅಲ್ಲಿ ಒಬ್ಬರೇ ಇದ್ದಾಗಲೇ ಆಗಂತುಕರು ಕೃತ್ಯ ಎಸಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post