ಅಜ್ಮೀರ್, ಮೇ 30: ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಮಾಜಿ ಸರಪಂಚ್ ರಾಮ್ ಸಿಂಗ್ ಚೌಧರಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಸಜೀವದಹನ ಪ್ರಕರಣಕ್ಕೆ ಇದೀಗ ದೊಡ್ಡ ತಿರುವುದು ಸಿಕ್ಕಿದೆ. ಆರಂಭದಲ್ಲಿ ಇದೊಂದು ಕಾರು ಅಪಘಾತ ಎನ್ನಲಾಗಿತ್ತು. ಆದರೆ, ಪೊಲೀಸರ ಹದ್ದಿನ ಕಣ್ಣಿನ ತನಿಖೆಯಿಂದಾಗಿ ಇದು ಅಪರಾಧ ಜಗತ್ತಿನ ವೆಬ್ ಸೀರೀಸ್ ನೋಡಿ, ಆಸ್ತಿಗಾಗಿ 17 ವರ್ಷದ ಮಗನೇ ರೂಪಿಸಿದ ಭೀಕರ ಕೊಲೆ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.
ಘಟನೆಯ ನಂತರ ಇಡೀ ಕುಟುಂಬ ಕಣ್ಣೀರಿಡುತ್ತಿದ್ದರೆ, ರಾಮ್ ಸಿಂಗ್ ಅವರ 17 ವರ್ಷದ ಅಪ್ರಾಪ್ತ ಮಗ ಮಾತ್ರ ಶಾಂತನಾಗಿದ್ದ. ತನ್ನ ತಾಯಿ ಪಕ್ಕದಲ್ಲಿ ಕುಳಿತು ಆಕೆಯನ್ನು ಸಮಾಧಾನಪಡಿಸುತ್ತಾ, ಅತ್ಯಂತ ನಿರಾಳವಾಗಿ ಚಹಾ ಕುಡಿಯುತ್ತಿದ್ದ. ಸಾವಿನ ಮನೆಯಲ್ಲಿ ಬಾಲಕನ ಈ ಅಸಹಜ ನಡವಳಿಕೆಯೇ ಪೊಲೀಸರಿಗೆ ಮೊದಲ ಅನುಮಾನ ಮೂಡಿಸಿತು.
ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಶವಗಳನ್ನು ಸ್ಕಾರ್ಪಿಯೋ ಕಾರಿನಲ್ಲಿಟ್ಟು ಬೆಂಕಿ ಹಚ್ಚಲಾಗಿತ್ತು. ಆದರೆ ಪೊಲೀಸರು ಸೂಕ್ಷ್ಮವಾಗಿ ಗಮನಿಸಿದಾಗ ಎರಡು ಪ್ರಮುಖ ಸಾಕ್ಷ್ಯಗಳು ಸಿಕ್ಕಿವೆ. ಕಾರು ಅಪಘಾತವಾಗಿದ್ದರೆ ಯಾರಾದರೂ ಒಬ್ಬರು ಡ್ರೈವಿಂಗ್ ಸೀಟಿನಲ್ಲಿ ಇರಬೇಕಿತ್ತು, ಆದರೆ ಎಲ್ಲಾ ನಾಲ್ಕು ಶವಗಳು ಹಿಂಬದಿಯ ಸೀಟಿನಲ್ಲಿದ್ದವು. ಮೃತರಲ್ಲಿ ಒಬ್ಬರಾದ ಎರಡನೇ ಪತ್ನಿ ಸರ್ಗ್ಯಾನ್ ದೇಹದ ಮೇಲೆ ಚೂರಿಯಿಂದ ಇರಿದ ಗಾಯಗಳಿದ್ದವು. ಇದರಿಂದಾಗಿ ಪೊಲೀಸರು ತನಿಖೆಯ ದಿಕ್ಕನ್ನು ಬದಲಿಸಿದರು.
ಪೊಲೀಸ್ ವಿಚಾರಣೆಯಲ್ಲಿ ಬಾಲಕ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತಂದೆ ರಾಮ್ ಸಿಂಗ್ ಎರಡನೇ ಮದುವೆಯಾಗಿದ್ದರಿಂದ ಆಸ್ತಿ ಕೈತಪ್ಪುವ ಭಯ ಮತ್ತು ಮೊದಲ ತಾಯಿಗೆ ನೀಡುತ್ತಿದ್ದ ಕಿರುಕುಳದಿಂದಾಗಿ ಬಾಲಕ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಕಳೆದ 5 ತಿಂಗಳುಗಳಿಂದ ಆತ ಅಪರಾಧ ಆಧಾರಿತ ವೆಬ್ ಸರಣಿಗಳು (Crime Web Series) ಮತ್ತು ಆನ್ಲೈನ್ ಗೇಮ್ಗಳನ್ನು ನೋಡಿ, ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಹಾಗೂ ಸಾಕ್ಷ್ಯಗಳನ್ನು ಹೇಗೆ ನಾಶಪಡಿಸಬೇಕು ಎಂದು ಸ್ಕೆಚ್ ಹಾಕಿದ್ದ.
ಘಟನೆಯ ರಾತ್ರಿ ತಂದೆ ರಾಮ್ ಸಿಂಗ್ ಮತ್ತು ಎರಡನೇ ಪತ್ನಿ ಬಿಯರ್ ಕುಡಿದು ಮಲಗಿದ್ದರು. ಮುಂಜಾನೆ 4 ಗಂಟೆಗೆ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದ ಬಾಲಕ, ತಂದೆಯ ಕೋಣೆಗೆ ನುಗ್ಗಿ ಅವರ ಕಿವಿಯ ಬಳಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಆದರೆ ಈ ಗಲಾಟೆಯಿಂದ ಎರಡನೇ ಪತ್ನಿ ಸರ್ಗ್ಯಾನ್ ಎಚ್ಚರಗೊಂಡು ಕಿರುಚಾಡಿದ್ದಾಳೆ. ಆಗ ಬಾಲಕನಿಗೆ ಸಹಾಯ ಮಾಡಲು ಆತನ ತಾಯಿ (ಮೊದಲ ಪತ್ನಿ ಸುನೀತಾ) ಮತ್ತು ಸಹೋದರಿ ಕೂಡ ಕೋಣೆಗೆ ಬಂದಿದ್ದಾರೆ. ನಂತರ ಎಲ್ಲರೂ ಸೇರಿ ಎರಡನೇ ಪತ್ನಿ ಸರ್ಗ್ಯಾನ್, ತಾಯಿ ಪುಸಿ ದೇವಿ ಮತ್ತು ಬ್ಯಾಂಕ್ ವ್ಯವಹಾರ ನೋಡಿಕೊಳ್ಳುತ್ತಿದ್ದ ಸೊಸೆ ಮಹಿಮಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶಕ್ಕೆ ಕಾರಿನೊಳಗೆ ಹಾಕಿ ಬೆಂಕಿ ಹಚ್ಚಿದ್ದರು.
ವೆಬ್ ಸೀರೀಸ್ ನೋಡಿ ಪರ್ಫೆಕ್ಟ್ ಮರ್ಡರ್ ಮಾಡಲು ಹೊರಟಿದ್ದ ಅಪ್ರಾಪ್ತ ಬಾಲಕ ಹಾಗೂ ಆತನ ತಾಯಿಯ ನಾಟಕವನ್ನು ಅಜ್ಮೀರ್ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post