ಉಡುಪಿ: ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಯುವಕನೊಬ್ಬ ಚಾಕುವಿನಿಂದ ಯುವತಿಗೆ ಇರಿದು, ತಾನೂ ಕತ್ತು ಕೊಯ್ದುಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಶ್ರೀ ವಿಠಲ ಭಂಡಾರಿ (28) ಚಿಕಿತ್ಸೆಗೆ ಸ್ಪಂದಿಸದೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಯುವಕ ಸಂದೇಶ್ ಕುಲಾಲ್ (28) ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಮೇಲ್ನೋಟಕ್ಕೆ ಪ್ರೇಮ ವೈಫಲ್ಯ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಜಗಳ ನಡೆಸಿದ್ದು ಬಳಿಕ ಆಕೆಯ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಯುವತಿಯನ್ನು ಕಕ್ಕುಂಜೆ ನಿವಾಸಿ ಸೌಮ್ಯಶ್ರೀ ಭಂಡಾರಿ ಎಂದು ಗುರುತಿಸಲಾಗಿದೆ. ಪಾಗಲ್ ಪ್ರೇಮಿ ಯುವಕ ಸಂದೇಶ್ ಕುಲಾಲ್ ಎಂಬಾತನಾಗಿದ್ದು ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗುತ್ತಿದೆ. ಆದರೆ, ಯುವತಿಗೆ ಇತ್ತೀಚೆಗೆ ಬೇರೆ ಯುವಕನ ಜೊತೆ ನಿಶ್ಚಿತಾರ್ಥವಾಗಿತ್ತು.
ಇದೇ ಸಿಟ್ಟಿನಲ್ಲಿ ಇಂದು ಸಂಜೆ ಕೆಲಸ ಮುಗಿಸಿ ತೆರಳುತ್ತಿದ್ದ ಯುವತಿಯನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿದ್ದು, ಇವರ ನಡುವೆ ವಾಗ್ವಾದ ನಡೆದು ಯುವಕ ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ. ರಸ್ತೆಯಲ್ಲಿ ರಕ್ತದೋಕುಳಿಯ ಮಧ್ಯೆ ಹಲವು ಸಮಯ ಜೋಡಿ ರಸ್ತೆಯಲ್ಲೇ ಬಿದ್ದುಕೊಂಡಿದ್ದರು. ಮಳೆಯೂ ಬರುತ್ತಿದ್ದರಿಂದ ರಸ್ತೆಯಲ್ಲಿ ನೆತ್ತರು ಕೋಡಿಯಂತೆ ಹರಿದಿದೆ.
ಬಳಿಕ ಅವರನ್ನು ಸ್ಥಳೀಯರು ಸೇರಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದು ಇಬ್ಬರೂ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಉಡುಪಿ ನಗರ ಠಾಣೆ ಪೊಲೀಸರು ಸ್ಥಳದಲ್ಲಿ ಪರಿಶೀಲಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post