ಪುತ್ತೂರು: ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್ ಅನ್ನು ರೈಲು ಚಲಿಸುತ್ತಿದ್ದ ವೇಳೆಯೇ ದರೋಡೆ ಮಾಡಿ ಕಳ್ಳ ಪರಾರಿಯಾದ ಘಟನೆ ನಗರದ ಕಬಕ- ಪುತ್ತೂರು ರೈಲ್ವೆ ನಿಲ್ದಾಣದ ಸಮೀಪದ ಹಾರಾಡಿ ಸಿಟಿಗುಡ್ಡೆ ಬಳಿ ಮಂಗಳವಾರ ನಸುಕಿನ ವೇಳೆ ಸಂಭವಿಸಿದೆ. ಬೆಂಗಳೂರಿನಲ್ಲಿ ವಾಸವಿರುವ ಉತ್ತರ ಕನ್ನಡ ಜಿಲ್ಲೆ ಕಾರವಾರದ ಶಿಕ್ಷಕ ರಮೇಶ್ ಮತ್ತು ನಿರ್ಮಲಾ ದಂಪತಿ ಬ್ಯಾಗ್ ಕಳೆದು ಕೊಂಡವರು. ದಂಪತಿ ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಊರಿಗೆ ಹೊರಟಿದ್ದರು.
ನಿರ್ಮಲಾ ಅವರು ಚಿನ್ನಾಭರಣ ಮತ್ತು ನಗದು ಹಣವಿದ್ದ ವ್ಯಾನಿಟಿ ಬ್ಯಾಗ್ ಅನ್ನು ಮಲಗುವ ವೇಳೆ ತಲೆಯ ಅಡಿಯಲ್ಲಿ ಇಟ್ಟಿದ್ದರು. ಬ್ಯಾಗ್ನ ಹಿಡಿಕೆ ಅವರ ಕುತ್ತಿಗೆಯಲ್ಲಿತ್ತು. ನಸುಕಿನ ಜಾವ 2.20ರ ಸುಮಾರಿಗೆ ಕಬಕ-ಪುತ್ತೂರು ರೈಲ್ವೆ ನಿಲ್ದಾಣಕ್ಕೆ ತಲುಪಿ, ಸುಮಾರು ಒಂದು ಕಿ.ಮೀ ದಾಟುತ್ತಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ತಲೆ ಅಡಿಯಲ್ಲಿದ್ದ ಬ್ಯಾಗ್ ಅನ್ನು ಎಳೆದಿದ್ದಾನೆ. ತಕ್ಷಣ ಅವರು ಆ ವ್ಯಕ್ತಿಯನ್ನು ದೂಡಿದ್ದು, ಬ್ಯಾಗ್ ಹಿಡಿಕೆ ತುಂಡಾಗಿದೆ. ಬ್ಯಾಗ್ ಅನ್ನು ಹಿಡಿದ ಕಳ್ಳ ರೈಲು ಬೋಗಿಯಿಂದ ಹಾರಲು ಯತ್ನಿಸಿದಾಗ, ನಿರ್ಮಲಾ ಅವರು ಆತನನ್ನು ಹಿಡಿದು, ತುರ್ತು ಸಂದರ್ಭದಲ್ಲಿ ರೈಲನ್ನು ನಿಲ್ಲಿಸುವ ಚೈನ್ ಎಳೆದಿದ್ದಾರೆ. ರೈಲಿನ ವೇಗ ನಿಧಾನವಾದಾಗ, ಕಳ್ಳ ಕೆಳಗೆ ಹಾರಿದ್ದಾನೆ. ಆತನನ್ನು ಹಿಡಿಯುವ ವೇಳೆ ಕೆಳಗೆ ಬಿದ್ದ ನಿರ್ಮಲಾ ಗಾಯಗೊಂಡಿದ್ದಾರೆ. ಕಳ್ಳ ಕತ್ತಲೆಯಲ್ಲಿ ಓಡಿ ಪರಾರಿಯಾಗಿದ್ದಾನೆ. ಈ ಸಂಬಂಧ ದಂಪತಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದು, ಬ್ಯಾಗ್ನಲ್ಲಿರುವ ₹ 40 ಸಾವಿರ ನಗದು, ಚಿನ್ನಾಭರಣ ಸೇರಿ ಒಟ್ಟು 8 ಲಕ್ಷ ಮೌಲ್ಯದ ಸ್ವತ್ತು ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post