ಮಂಗಳೂರು: ನಗರದ ಪಾಂಡೇಶ್ವರದ ಶ್ರೀನಿವಾಸ ಕಾಲೇಜು ಎದುರಿನ ರೈಲ್ವೆ ಟ್ರ್ಯಾಕ್ ಸಮೀಪವಿರುವ ಮಿಜಾರ್ ಅಪಾರ್ಟ್ಮೆಂಟ್ನಲ್ಲಿ ತಡರಾತ್ರಿ ಲಿಫ್ಟ್ನಲ್ಲಿ ಸಿಲುಕಿಕೊಂಡಿದ್ದ ಅಸ್ಸೋಂ ಮೂಲದ ಯುವಕನೊಬ್ಬನನ್ನು ಪಾಂಡೇಶ್ವರ ಅಗ್ನಿಶಾಮಕ ಠಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅಸ್ಸೋಂನ ಕೇಶವ್ (33) ಎಂಬಾತ ರಕ್ಷಣೆಗೊಳಗಾದ ಯುವಕ.
ಸೋಮವಾರ ನಸುಕಿನ ಜಾವ ಸುಮಾರು 2 ಗಂಟೆಯ ವೇಳೆಗೆ ಮಿಜಾರ್ ಅಪಾರ್ಟ್ಮೆಂಟ್ನ ಗ್ರೌಂಡ್ ಫ್ಲೋರ್ನಲ್ಲಿ ಲಿಫ್ಟ್ ತಾಂತ್ರಿಕ ದೋಷದಿಂದ ಏಕಾಏಕಿ ಸ್ಥಗಿತಗೊಂಡು ಕೇಶವ್ ಒಳಗೆ ಸಿಲುಕಿಕೊಂಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಅಗ್ನಿಶಾಮಕ ಠಾಣಾ ಸಿಬ್ಬಂದಿ ತುರ್ತಾಗಿ ಸ್ಥಳಕ್ಕೆ ಧಾವಿಸಿದರು. ಹಳೆಯ ಮಾದರಿಯ ಲಿಫ್ಟ್ ಆಗಿದ್ದರಿಂದ ಕೀ ಮೂಲಕ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ತಕ್ಷಣವೇ ಹೈಡ್ರಾಲಿಕ್ ಸ್ಪ್ರೆಡರ್ ಉಪಕರಣವನ್ನು ಬಳಸಿ ಲಿಫ್ಟ್ನ ಬಾಗಿಲನ್ನು ತೆರೆದು, ಒಳಗೆ ಸಿಲುಕಿದ್ದ ಯುವಕನನ್ನು ಯಾವುದೇ ಅಪಾಯವಿಲ್ಲದೆ ರಕ್ಷಣೆ ಮಾಡಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಹರೀಶ್ಚಂದ್ರ, ಲೀಡಿಂಗ್ ಫೈರ್ಮ್ಯಾನ್ ಚಂದ್ರ, ಚಾಲಕ ಕಿರಣ್ ಹಾಗೂ ಸಿಬ್ಬಂದಿಗಳಾದ ರಮೇಶ್ ಮತ್ತು ಲಾಲ್ ಅಹಮದ್ ಭಾಗವಹಿಸಿದ್ದರು.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಪ್ರವೀಣ್ ಕೆ.ಎನ್ ಅವರು, ” ಶ್ರೀನಿವಾಸ ಕಾಲೇಜು ಎದುರಿನ ರೈಲ್ವೆ ಟ್ರ್ಯಾಕ್ ಬಳಿಯ ಅಪಾರ್ಟ್ಮೆಂಟ್ನಲ್ಲಿ ರಾತ್ರಿ ಸುಮಾರು 2 ಗಂಟೆಗೆ ಲಿಫ್ಟ್ ಜಾಮ್ ಆಗಿರುವ ಬಗ್ಗೆ ಕರೆ ಬಂದಿತ್ತು. ಲಿಫ್ಟ್ ಹಳೆಯದಾಗಿದ್ದರಿಂದ ಕೀ ಮೂಲಕ ತೆರೆಯಲು ಸಾಧ್ಯವಾಗಲಿಲ್ಲ. ತಕ್ಷಣ ನಮ್ಮಲ್ಲಿದ್ದ ಹೈಡ್ರಾಲಿಕ್ ಸ್ಪ್ರೆಡರ್ ಬಳಸಿ ಲಿಫ್ಟ್ ಬಾಗಿಲು ತೆರೆದು ಗ್ರೌಂಡ್ ಫ್ಲೋರ್ನಲ್ಲಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರತರಲಾಯಿತು” ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.







Discussion about this post