ಮಂಗಳೂರು: ಮಹಿಳಾ ಸುರಕ್ಷೆತೆಗೆ ಒತ್ತು ನೀಡುವ ದೃಷ್ಟಿಯಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ (ಆ.28) ‘ಮಹಿಳಾ ಸುರಕ್ಷತೆಗಾಗಿ ಒಂದು ದಿನ’- ‘112ಕ್ಕೆ ಕರೆ ನಿಮ್ಮಿಂದ-ನೀವಿರುವಲ್ಲಿಗೆ ಭೇಟಿ ನಮ್ಮಿಂದ’ ಪರಿಕಲ್ಪನೆಯಲ್ಲಿ ಆಂದೋಲನ ಮಾದರಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಪೊಲೀಸ್ ಕಮಿಷನರ್ ಸೇರಿದಂತೆ 100ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳ ತಂಡ ಮಹಿಳಾ ಸಿಬ್ಬಂದಿಯೊಂದಿಗೆ ಇಆರ್ಎಸ್ಎಸ್-112ರ ಅಡಿಯಲ್ಲಿ ಸಾರ್ವಜನಿಕರ ತುರ್ತು ಕರೆಗೆ ಸ್ಪಂದಿಸಲಿದೆ. ಒಲಿಂಪಿಯನ್ ಎಂ.ಆರ್. ಪೂವಮ್ಮ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಹಿಳೆಯರ ಕೌಟುಂಬಿಕ ಸಮಸ್ಯೆ, ವಿದ್ಯಾರ್ಥಿನಿಯರಿಗೆ ಕಿರುಕುಳ ಘಟನೆ, ಸಾರ್ವನಿಕ ಸ್ಥಳ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ತೊಂದರೆ, ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳ, ಸೈಬರ್ ಸಮಸ್ಯೆ, ಫೋಟೊ ವೈರಲ್, ವೈಯಕ್ತಿಕ ಮೊಬೈಲ್ಗೆ ಕರೆ, ಎಸ್ಎಂಎಸ್ ಚೇಷ್ಟೆ, ಪ್ರವಾಸಿಗರಿಗೆ ತೊಂದರೆಯಂತಹ ಯಾವುದೇ ಪ್ರಕರಣವನ್ನು ಈ ವೇಳೆ ಪೊಲೀಸರ ಗಮನಕ್ಕೆ ತರಬಹುದು ಎಂದು ಹೇಳಿದರು.
‘ಮಹಿಳೆಯರು ನಗರದಲ್ಲಿ ಹೆಚ್ಚು ಸುರಕ್ಷಿತವಾಗಿ ಇರುವಂತೆ ಮಾಡಲು ಇದು ಸಣ್ಣ ಪ್ರಯತ್ನ. ಈ ಪ್ರಯತ್ನಕ್ಕೆ ಕಮಿಷನರೇಟ್ ವ್ಯಾಪ್ತಿಯ ಎಲ್ಲ ನಾಗರಿಕರು ಸಹಕಾರ ನೀಡಿ, ನಿಮ್ಮ ಅಕ್ಕಪಕ್ಕದಲ್ಲೂ ಈ ಸಮಸ್ಯೆ ಇದ್ದರೂ ಗಮನಕ್ಕೆ ತರಬಹುದು. ಚರ್ಚಿತ ವಿಚಾರವನ್ನು ಗೌಪ್ಯವಾಗಿ ಇರಿಸಲಾಗುವುದು’ ಎಂದು ಶಶಿಕುಮಾರ್ ತಿಳಿಸಿದ್ದಾರೆ.
Discussion about this post