ಚಿಕ್ಕಬಳ್ಳಾಪುರ, ಅ.12: ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳೆಂದು ಮಗಳ ಕತ್ತು ಕೊಯ್ದು ಕೊಲೆ ಮಾಡಿರುವ ತಂದೆ, ತಾನೇ ಪೊಲೀಸರಿಗೆ ಶರಣಾದ ಘಟನೆ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ. ಯುವತಿ ಕವನ (20) ಮೃತ ದುರ್ದೈವಿ, ಮಂಜುನಾಥ್ (47) ಕೊಲೆ ಮಾಡಿ ಪೋಲಿಸರಿಗೆ ಶರಣಾಗಿರುವ ತಂದೆ. ಮಗಳು ಪ್ರೀತಿ ಮಾಡುತ್ತಿದ್ದ ವಿಷಯ ತಿಳಿದು ಆಕ್ರೋಶಗೊಂಡಿದ್ದ ತಂದೆ, ಮಗಳನ್ನ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ವಿಶ್ವನಾಥಪುರ ಪೋಲಿಸರು ಭೇಟಿ ಪರಿಶೀಲಿಸಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನ್ಯ ಜಾತಿಯ ಯುವಕನೊಂದಿಗೆ ಪ್ರೀತಿ ಸಂಬಂಧ ಮುಂದುವರೆಸದಂತೆ ಮಂಜುನಾಥ್ ಮಗಳಿಗೆ ಬುದ್ಧಿವಾದ ಹೇಳಿದ್ದರು. ಮನೆಯಲ್ಲಿ ಈ ವಿಚಾರವಾಗಿ ಮನಸ್ತಾಪ ಹೆಚ್ಚಾಗಿದ್ದರಿಂದ ಹುಡುಗನೊಂದಿಗೆ ಸಂಬಂಧ ಮುಂದುವರಿಸುವುದಿಲ್ಲ ಎಂದು ಮಗಳು ತಂದೆಗೆ ಮಾತು ಕೊಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಹಿರಿಯ ಮಗಳ ಜೊತೆ ತಡರಾತ್ರಿ ಗಲಾಟೆ ನಡೆದಿತ್ತು. ಚಿಕ್ಕವಳು ಓಡಿ ಹೋದಳು, ನೀನೂ ಸಹ ಅನ್ಯಜಾತಿ ಯವಕನನ್ನ ಪ್ರೀತಿ ಮಾಡ್ತಿದ್ದೀಯಾ? ನಾವು ಊರಲ್ಲಿ ಹೇಗೆ ಮರ್ಯಾದೆಯಿಂದ ಒಡಾಡಬೇಕು ಅಂತಾ ಮಗಳನ್ನ ಮನೆಯಲ್ಲಿದ್ದ ಕತ್ತಿಯಿಂದ ಆಕೆಯ ಕತ್ತನ್ನೇ ಕೊಯ್ದು ಹಾಕಿದ್ದಾರೆ.
ಈ ಘಟನೆ ಗ್ರಾಮದಲ್ಲಿ ಭಾರಿ ಆತಂಕ ಮೂಡಿಸಿದ್ದು, ಬೆಳಗ್ಗೆ ಮನೆಯ ಮುಂದೆ ನೂರಾರು ಜನರು ನೆರೆದಿದ್ದರು. ವಿಶ್ವನಾಥಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
Discussion about this post