ಮಂಗಳೂರು: ‘ತಾಲ್ಲೂಕಿನ ಮಳಲಿ ಜುಮ್ಮಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಕಾನೂನು ಹೋರಾಟದಿಂದ ದೂರ ಉಳಿದಿದ್ದ ವಕ್ಫ್ ಮಂಡಳಿ ತನ್ನನ್ನೂ ಕಕ್ಷಿದಾರರೆಂದು ಪರಿಗಣಿಸುವಂತೆ ಅರ್ಜಿ ಸಲ್ಲಿಸಲಿದೆ. ಈ ಕುರಿತ ಕಾನೂನು ಹೋರಾಟದಲ್ಲಿ ಸೇರಿಕೊಳ್ಳಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕೆಲ ಮಾಧ್ಯಮದಲ್ಲಿ ಬರುತ್ತಿರುವ ಹಾಗೆ ಕೋರ್ಟ್ನಲ್ಲಿ ಟ್ರಯಲ್ ನಡೆದೇ ಇಲ್ಲ. ಹೈಕೋರ್ಟ್ನಲ್ಲಿ ಜನವರಿ 31 ರಂದು ಕೆಳ ನ್ಯಾಯಾಲಯದಲ್ಲಿ ಇದು ವಕ್ಫ್ ಆಸ್ತಿ ಹೌದಾ ಅಲ್ವಾ ಎಂದು ತನಿಖೆ ಮಾಡಿ ಎಂದು ಆದೇಶ ನೀಡಲಾಗಿದೆ. ಅದರಂತೆ ಇನ್ನು 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.
‘ಮಳಲಿಯ ಈ ಮಸೀದಿಯಲ್ಲಿ ನಮಾಜ್ ನಡೆಸಲು ಜಾಗ ಸಾಕಾಗುತ್ತಿರಲಿಲ್ಲ. ದೊಡ್ಡ ಮಸೀದಿ ನಿರ್ಮಿಸಲು ಹಳೆ ಮಸೀದಿಯನ್ನು 2022 ನ.9ರಂದು ಕೆಡವಿದ್ದೆವು. ಅಲ್ಲಿದ್ದ ಕಾಷ್ಟಶಿಲ್ಪವನ್ನು ನೋಡಿದ ಹೊರಗಿನವರು ಅಲ್ಲಿ ದೇವಸ್ಥಾನ ಇತ್ತೆಂದು ನ್ಯಾಯಾಲಯದಲ್ಲಿ ವಿನಾಕಾರಣ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹಿಂದೆ ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಅನೇಕ ಮಸೀದಿಗಳಲ್ಲಿ ಇಲ್ಲಿನ ಸಾಂಪ್ರದಾಯಿಕ ಶೈಲಿಯ ಕಾಷ್ಟಶಿಲ್ಪಗಳಿವೆ. ಇದರಲ್ಲೇನೂ ವಿಶೇಷ ಇಲ್ಲ’ ಎಂದರು.
‘ಸರ್ಕಾರದ ಕಂದಾಯ ಇಲಾಖೆ ಅಧಿಕಾರಿಗಳೇ 2004ರಲ್ಲಿ ಈ ಸರ್ವೇ ನಡೆಸಿದ್ದರು. ಅದರಲ್ಲೂ ಇದು ಮಸೀದಿಗೆ ಸೇರಿದ ಜಾಗ ಎಂದು ಉಲ್ಲೇಖಿಸಿದ್ದಾರೆ. 2014ರಲ್ಲಿ ಮಸೀದಿಯನ್ನು ವಕ್ಫ್ ಮಂಡಳಿ ವ್ಯಾಪ್ತಿಗೆ ತರುವ ಪ್ರಕ್ರಿಯೆ ಆರಂಭವಾಗಿತ್ತು. 2016ರಲ್ಲೇ ಈ ಕುರಿತು ಗಜೆಟ್ ಅಧಿಸೂಚನೆ ಪ್ರಕಟವಾಗಿದೆ. ಒಂದು ಸಲ ವಕ್ಫ್ ಮಂಡಳಿ ಹೆಸರಿನಲ್ಲಿ ನೋಂದಣಿಯಾದ ಆಸ್ತಿಯ ಸದಾ ವಕ್ಫ್ ಆಸ್ತಿಯಾಗಿರುತ್ತದೆ’ ಎಂದರು.
ಮಸೀದಿ ಜಾಗದಲ್ಲಿ ಶಿವ ದೇವಾಲಯ ಇದ್ದ ಬಗ್ಗೆ ಹಿಂದೂ ಸಂಘಟನೆಗಳು ವಾದ ಮಾಡಲಾಗಿತ್ತು. ತಂಬೂಲ ಪ್ರಶ್ನೆಯಲ್ಲಿ ಹಿಂದು ದೇವಲಾಯ ಎಂದು ಕಂಡು ಬಂದರೆ ಅದಕ್ಕೆ ಒಂದು ಸಮಿತಿ ಮಾಡಲಾಗುತ್ತದೆ. ಅಷ್ಟಮಂಗಳ ಪ್ರಶ್ನೆ ಬಳಿಕ ದಾಖಲೆ ಸಹಿತ ಕಾನೂನು ಹೋರಾಟಕ್ಕೆ ವಿಎಚ್ಪಿ ಯೋಜನೆ ಮಾಡಿತ್ತು. ಇನ್ನು ಮಸೀದಿ ಆಡಳಿತ ಮಂಡಳಿ ಮತ್ತು ಸ್ಥಳೀಯ ಮುಸ್ಲಿಮರು ಯಾವುದೇ ರೀತಿ ಪ್ರತಿಕ್ರಿಯೆ ನೀಡಲು ಮುಂದಾಗಿರಲಿಲ್ಲ. ಈ ಬಗ್ಗೆ ಕಾನೂನು ಮೊರೆ ಹೋಗಿ ನಮ್ಮ ಮಸೀದಿ ಉಳಿಸಿಕೊಳ್ಳುತ್ತೇವೆ ಅಂತಾ ಅವರು ಮೌನಕ್ಕೆ ಶರಣಾಗಿದ್ದರು.
ಮಳಲಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಜಾಕ್, ಉಪಾಧ್ಯಕ್ಷ ಎಂ.ಎ ಅಬೂಬಕರ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್, ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಎ.ಕೆ.ಜಮಾಲ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
Discussion about this post