ಮಂಗಳೂರು, ಅ.7: ಶೂಟೌಟ್ ಪ್ರಕರಣದಲ್ಲಿ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಅವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ನಗರದ ಮೋರ್ಗನ್ಸ್ಗೇಟ್ನಲ್ಲಿ ಉದ್ಯಮಿ ಹಾರಿಸಿದ ಗುಂಡು ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ಪುತ್ರನ ಮೆದುಳು ನಿಷ್ಕ್ರಿಯಗೊಂಡಿದೆ. ಉದ್ಯಮಿ ರಾಜೇಶ್ ಪ್ರಭು ಅವರ ಪುತ್ರ ಸುಧೀಂದ್ರ ಪ್ರಭು (16) ಮೆದುಳು ನಿಷ್ಕ್ರಿಯಗೊಂಡ ಬಾಲಕ.
ಆರೋಪಿ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ. ಆದರೆ, ರಾಜೇಶ್ ಪ್ರಭು ಹೃದಯಾಘಾತಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸ್ ವಶದಲ್ಲಿದ್ದುಕೊಂಡೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಣಕಾಸು ವಿಷಯದಲ್ಲಿ ಉದ್ಯಮಿಯ ಪತ್ನಿ ಹಾಗೂ ಚಾಲಕ, ಕ್ಲೀನರ್ ನಡುವೆ ಮಂಗಳವಾರ ಸಂಜೆ ವಾಗ್ವಾದ ಏರ್ಪಟ್ಟಿತು. ಈ ವೇಳೆ ಸ್ಥಳಕ್ಕಾಗಮಿಸಿದ ತಂದೆ, ಮಗ ಕೂಡಾ ಸಿಬ್ಬಂದಿ ಜೊತೆ ಜಗಳಕ್ಕಿಳಿದಿದ್ದರೆನ್ನಲಾಗಿದೆ. ಈ ನಡುವೆ ಪುತ್ರ ಸುಧೀಂದ್ರ ಚಾಲಕ, ಕ್ಲೀನರ್ ಮೇಲೆ ಹಲ್ಲೆಗೈದಿದ್ದು, ರಾಜೇಶ್ ಪ್ರಭು ಪಿಸ್ತೂಲ್ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡು ಸುಧೀಂದ್ರನಿಗೇ ತಗುಲಿತ್ತು. ಎಡಗಣ್ಣಿನ ಹತ್ತಿರದಿಂದ ಹಾದುಹೋಗಿದ್ದ ಗುಂಡು ತಲೆಯ ಒಳಭಾಗದಲ್ಲಿ 7-8 ಇಂಚು ಆಳಕ್ಕಿಳಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Discussion about this post