ರಾಯ್ಪುರ: ಛತ್ತೀಸ್ಗಢದ ಜಶ್ಪುರ ಜಿಲ್ಲೆಯ ಪಠಾಲಗಾಂವ್ ಪಟ್ಟಣದಲ್ಲಿ ಕಾರೊಂದು ಧಾರ್ಮಿಕ ಮೆರವಣಿಗೆ ನಡೆಸುತ್ತಿದ್ದ ಸುಮಾರು 20 ಜನರ ಮೇಲೆ ಹರಿದು ಹೋದ ಭಯಾನಕ ಘಟನೆ ನಡೆದಿದೆ.
ಈ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು,15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದುರ್ಗಾದೇವಿಯ ವಿಗ್ರಹವನ್ನು ವಿಸರ್ಜಿಸಲು ನೂರಾರು ಜನರು ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು, ಅಲ್ಲಿ ನೆರೆದಿದ್ದ ಕೆಲವು ಜನರು ಈ ಅಪಘಾತದ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ವೇಗವಾಗಿ ಬಂದ ಕಾರು ಮೆರವಣಿಗೆ ಮಾಡುತ್ತಿದ್ದ ಜನರ ಮೇಲೆ ಏಕಾಏಕಿ ಬಂದೇರಗಿದೆ. ಕಾರು ಬಂದ ರಭಸಕ್ಕೆ ಅಲ್ಲಿದ್ದ ಕೆಲವು ಜನರು ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದಿದ್ದಾರೆ. ಇಲ್ಲಿಯವರೆಗೆ ಒಂದು ಸಾವು ವರದಿಯಾಗಿದೆ. ಸುಮಾರು 15 ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರು, ಜಶ್ಪುರ್, ವಿಜಯ್ ಅಗರ್ವಾಲ್ ಹೇಳಿದ್ದಾರೆ.
ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳಾದ ಬಬ್ಲೂ ವಿಶ್ವಕರ್ಮ (21) ಮತ್ತು ಶಿಶುಪಾಲ್ ಸಾಹು (26) ಮಧ್ಯಪ್ರದೇಶದ ಸಿಂಗ್ರೌಲಿ ನಿವಾಸಿಗಳಾಗಿದ್ದು, ಅವರನ್ನು ಬಂಧಿಸಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಕಾರಿನಲ್ಲಿ ಭಾರಿ ಪ್ರಮಾಣದ ಗಾಂಜಾ ಇತ್ತು ಎಂದು ತಿಳಿದು ಬಂದಿದೆ. ಘಟನೆಯಿಂದ ಆಕ್ರೋಶಗೊಂಡಿರುವ ನೂರಾರು ಜನರು ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.
ಇಂತಹ ಘಟನೆ ಜರುಗಿರುವುದು ತುಂಬಾ ದುಃಖಕರವಾದ ಮತ್ತು ನೋವಿನ ಸಂಗತಿಯಾಗಿದೆ. ಘಟನೆ ನಡೆದ ತಕ್ಷಣ ಆರೋಪಿಗಳನ್ನು ಬಂಧಿಸಲಾಗಿದೆ.
https://twitter.com/rose_k01/status/1448982134287265793?s=20
Discussion about this post