ಮಂಗಳೂರು: ಕೆಎಂಎಫ್ನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ ಬರೋಬ್ಬರಿ 125 ಜನರಿಗೆ 2.50 ಕೋಟಿ ರೂಪಾಯಿಗೂ ಹೆಚ್ಚು ಪಂಗನಾಮ ಹಾಕಿದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ರಾಮ್ಪ್ರಸಾದ್ ಯಾನೆ ಹರೀಶ್ ಬಂಧಿತ ಆರೋಪಿಯಾಗಿದ್ದಾನೆ. ರಾಮ್ಪ್ರಸಾದ್ ಯಾನೆ ಹರೀಶ್ ತಾನು ಕೆ ಎಂಎಫ್ ನಿರ್ದೇಶಕ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಅಮಾಯಕರಿಗೆ ಕೆಎಂಎಫ್ ಮಂಗಳೂರು ಇದರ ವಿವಿಧ ವಿಭಾಗಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡು ವಂಚಿಸಿದ್ದಾನೆ. ಅಲ್ಲದೆ ಕೆಎಂಎಫ್ ಹೆಸರಿನಲ್ಲಿ ಬೆಂಗಳೂರಿನಿಂದ ತರಬೇತುದಾರರನ್ನು ಕರೆಸಿ ಪುತ್ತೂರು ಮತ್ತು ಮಂಗಳೂರಿನ ಉರ್ವಾದಲ್ಲಿ 15 ದಿನಗಳ ಟ್ರೈನಿಂಗ್ ಕೊಟ್ಟಿದ್ದಾನೆ. ಕೆಲವರಿಗೆ ನೇಮಕಾತಿ ಆದೇಶ ಪ್ರತಿಗಳನ್ನು ತೋರಿಸಿ ವಂಚನೆ ಮಾಡುತ್ತಿದ್ದ. ಈತ ಪ್ರತೀ ವ್ಯಕ್ತಿಯಿಂದ ಕಡಿಮೆ ಎಂದರೆ 50 ಸಾವಿರದಿಂದ ಹಿಡಿದು 3ಲಕ್ಷ ರೂಪಾಯಿವರೆಗೆ ಹಣ ಪಡೆದುಕೊಂಡಿದ್ದಾನೆ.
ಅದು ಗೂಗಲ್ ಪೇ, ಕ್ಯಾಶ್, ಬ್ಯಾಂಕ್ ಟ್ರಾನ್ಸಫರ್ ಸೇರಿ ಹಲವು ವಿಧಗಳಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಕ್ರಿಮಿನಲ್ ಆರೋಪಿಯ ವಂಚನೆ ತಿಳಿಯದ ಹಲವರು ಅಮಾಯಕರು ಮೋಸ ಹೋಗಿದ್ದಾರೆ. ಇಷ್ಟೆ ಅಲ್ಲದೆ ಅಮಾಯಕ ನಿರುದ್ಯೋಗಿ ಯುವತಿಯರಿಗೂ ವಂಚನೆ ಮಾಡಿದ್ದಾರೆ. ಹಲವು ಮಂದಿಯಿಂದ ದುಡ್ಡು ಪಡೆದುಕೊಂಡು ಯುವತಿಯರನ್ನು ಬ್ಲ್ಯಾಕ್ ಮೇಲ್ ಕೂಡಾ ಮಾಡುತ್ತಿದ್ದ. ಬೆಂಗಳೂರಿನ ಕೆಎಂಎಫ್ಗೂ ಡೈರಿಗೆ ಕೆಲ ಸಂತ್ರಸ್ತರನ್ನು ಕರೆದುಕೊಂಡು ಹೋಗಿ ಕೆಲಸದ ಪ್ರಾತ್ಯಕ್ಷಿಕೆ ತೋರಿಸಿದ್ದಾನೆ. ನೂರಾರು ಯುವಕರು ಮತ್ತು ಯುವತಿಯರು ಈ ಮಹಾ ಮೋಸಗಾರನಿಂದ ವಂಚನೆಗೆ ಒಳ ಪಟ್ಟಿದ್ದಾರೆ, ಈ ಹಿಂದೆ ಕೂಡಾ ಇತ ಎಂ ಆರ್ ಪಿ ಎಲ್ ಮತ್ತು ಎರ್ ಪೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟಿ ಗಟ್ಟಲೆ ಹಣ ವಂಚಿಸಿದ್ದಾನೆ. ಆರೋಪಿ ರಾಮ್ಪ್ರಸಾದ್ ನೊಂದಿಗೆ ಮಲ್ಲೇಶ್ ಎಂಬ ವ್ಯಕ್ತಿ ಕೊಡಾ ಈ ವಂಚನೆಯಲ್ಲಿ ಇದ್ದಾನೆ ಎಂದು ವಂಚನೆಗೆ ಒಳಗಾದವರು ಹೇಳಿ ಕೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ: ಚಂದ್ರವತಿ ಎಂಬ ಮಹಿಳೆ ಫರಂಗಿಪೇಟೆ ವಳಚ್ಚಿಲ್ ಬಳಿಯ 31 ವರ್ಷದ ಯುವಕನಿಗೆ ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವ ಆಸೆ ಹುಟ್ಟಿಸಿ ಹಣ ಪಡೆದಿದ್ದರು. ಅವರು ಕೆ ಎಂ ಎಫ್ ನ ಕಿರಿಯ ನಿರ್ದೇಶಕ ಹರೀಶ್ ಎಂಬವರನ್ನು ಪರಿಚಯಿಸಿ ಅವರು ಉದ್ಯೋಗ ತೆಗೆಸಿಕೊಡುತ್ತಾರೆ ಎಂದು ಭರವಸೆ ನೀಡಿ ಹಣ ಪಡೆದಿದ್ದರು. ನೇಮಕಾತಿ ಪತ್ರ ಸಿಕ್ಕಿದ ಬಳಿಕ ಈ ವ್ಯಕ್ತಿ ತನ್ನ 5 ಮಂದಿ ಸ್ನೇಹಿತರಿಗೂ ಕೆಲಸ ನೀಡುವಂತೆ ವಿನಂತಿಸಿ ಅವರಿಂದಲೂ ಹಣ ಕೊಡಿಸಿದ್ದಾನೆ. ಇದರ ಮಧ್ಯೆ ಉದ್ಯೋಗ ಕೊಡಲು ಸಾಧ್ಯವಾಗದೆ ಚಂದ್ರವತಿ ಇವರಿಂದ ಪಡೆದ ರೂ 10,70,000 ಹಣವನ್ನು ಚೆಕ್ ಮೂಲಕ ವಾಪಸ್ನೀಡಿದ್ದಳು. ಆದರೆ, ಆರೋಪಿ ರಾಮಪ್ರಸಾದ್ ರಾವ್ ಪಿ ಯಾನೆ ಹರೀಶ್ಗೆ ಫೋನ್ ಮಾಡಿ ತಾನು ಉದ್ಯೋಗ ನೀಡುವುದಾಗಿ ಮತ್ತೆ ಅದೇ ವ್ಯಕ್ತಿಯಿಂದ ರೂ 1.5 ಲಕ್ಷ ಮತ್ತು ಆತನ ಗೆಳೆಯರಿಂದ ರೂ 12 ಲಕ್ಷ ಪಡೆದಿದ್ದನು. ಆದರೆ, ಹಣ ಪಡೆದ ಆತ ಉದ್ಯೋಗ ನೀಡಿರಲಿಲ್ಲ. ಕೊನೆಗೆ ವಂಚನೆಗೊಳಗಾದ ವ್ಯಕ್ತಿ ಪೊಲೀಸ್ ದೂರು ನೀಡಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ರಾಮಪ್ರಸಾದ್ ರಾವ್ ಪಿ ಯಾನೆ ಹರೀಶ್, ಹೇಮಂತ್, ಸುರೇಂದ್ರ ರೆಡ್ಡಿ, ದರ್ಶನ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Discussion about this post