ಉಡುಪಿ, ಫೆ 03: ಮೂರು ವರ್ಷಗಳ ಹಿಂದೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಕೋಟೆ ಮಾಬುಕಳದ ಮಿಲನ ರೆಸಿಡೆನ್ಸಿ ಫ್ಲ್ಯಾಟ್ನಲ್ಲಿ ನಡೆದ ವಿಶಾಲ ಗಾಣಿಗ(35) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ನಾಲ್ಕನೇ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಉತ್ತರ ಪ್ರದೇಶದ ಲಕ್ನೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆ.2ರಂದು ಬಂಧಿಸಿದ್ದಾರೆ.
ತಲೆ ಮರೆಸಿಕೊಂಡಿದ್ದ ಧರ್ಮೇಂದ್ರ ಕುಮಾರ್ ಸುಹಾನಿ ಎಂಬ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಲಕ್ನೋದಲ್ಲಿ ಬಂಧಿಸಿದ್ದಾರೆ. 2021ನೇ ಜುಲೈ ತಿಂಗಳಿನಲ್ಲಿ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಮ್ರಗೋಡುವಿನಲ್ಲಿರುವ ಮಿಲನ ರೆಸಿಡೆನ್ಸಿಯಲ್ಲಿ ವಿಶಾಲ ಗಾಣಿಗ ಅವರ ಕೊಲೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಆಕೆಯ ಗಂಡ ರಾಮಕೃಷ್ಣ, ಸ್ವಾಮಿನಾಥನ್ ನಿಷಾದ್, ರೋಹಿತ್ ರಾಣಾ ಪ್ರತಾಪ್ ಎಂಬವರನ್ನು ಈಗಾಗಲೇ ಬಂಧಿಸಲಾಗಿತ್ತು.
ಧರ್ಮೇಂದ್ರ ಕುಮಾರ್, ಪ್ರಕರಣದ ಪ್ರಮುಖ ಆರೋಪಿ ರಾಮಕೃಷ್ಣ ಗಾಣಿಗ ಹಾಗೂ ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್ನಿಗೂ ಪರಿಚಯ ಮಾಡಿಸಿ ಕೊಲೆಗೆ ಸಹಕರಿಸಿದ್ದನು. ಈತನು ಪ್ರಕರಣ ದಾಖಲಾದ ವಿಚಾರ ತಿಳಿದು, 3 ವರ್ಷಗಳಿಂದ ದುಬೈಯಲ್ಲಿ ತಲೆಮರೆಸಿಕೊಂಡಿದ್ದನು. ಧರ್ಮೇಂದ್ರ ಫೆ.2ರಂದು ದುಬೈಯಿಂದ ಲಕ್ನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಬರುತ್ತಿರುವ ಮಾಹಿತಿ ಪಡೆದ ಬ್ರಹ್ಮಾವರ ಠಾಣಾ ಎಸ್ಸೈ ಮಧು ಬಿ.ಇ. ಹಾಗೂ ಎಎಸೈ ಶಾಂತರಾಜ್, ಸಿಬ್ಬಂದಿ ಸುರೇಶ ಬಾಬು ತಂಡವು ವಿಮಾನ ನಿಲ್ದಾಣದಲ್ಲಿ ಆರೋಪಿ ಧರ್ಮೇಂದ್ರನನ್ನು ವಶಕ್ಕೆ ಪಡೆದುಕೊಂಡಿತು. ಅಲ್ಲಿಂದ ಆರೋಪಿಯನ್ನು ಫೆ.3ರಂದು ಉಡುಪಿಗೆ ಕರೆ ತಂದ ತಂಡವು ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿತು.
Discover more from Coastal Times Kannada
Subscribe to get the latest posts sent to your email.
Discussion about this post