ಮಂಗಳೂರು: ಎಸ್ಡಿಪಿಐ ‘ಜನಾಧಿಕಾರ’ ಸಮಾವೇಶಕ್ಕೆ ತೆರಳುತ್ತಿದ್ದ ಕಾರ್ಯಕರ್ತರು ಪೊಲೀಸರಿಗೆ ನಿಂದನೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಮತ್ತೆ 6 ಮಂದಿಯನ್ನು ಬಂಧಿಸಲಾಗಿದೆ. ಮೇ 27ರಂದು ಮಂಗಳೂರಿನ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಎಸ್ಡಿಪಿಐ ಸಮಾವೇಶ ನಡೆದಿತ್ತು. ಮೇ 31ರ ಬೆಳಗ್ಗೆ ಬೈಕ್ನಲ್ಲಿ ಪೊಲೀಸರನ್ನು ನಿಂದಿಸಿ ಘೋಷಣೆ ಹಾಕುತ್ತಿದ್ದ ಇಬ್ಬರು ಎಸ್ಡಿಪಿಐ ಕಾರ್ಯಕರ್ತರು ಮತ್ತು ಅವರಿಗೆ ಆಶ್ರಯ ನೀಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ವೇಳೆ ಪೊಲೀಸರಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬೆಂಗಳೂರಿನ ಮಡಿವಾಳ ಪೊಲೀಸರು 3 ಮಂದಿಯನ್ನು ಬಂಧಿಸಿದ್ದರು. ಮೇ 31ರಂದು ರಾತ್ರಿ ಮತ್ತೆ ಆರು ಮಂದಿಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
ಗುರುಪುರದ ಸಫ್ವಾನ್ ಯಾನೆ ಫಹಾದ್ (26), ಅಬ್ದುಲ್ ಸಲಾಂ (23), ಸೂರಲ್ಪಾಡಿಯ ಮೊಹಮ್ಮದ್ ಹುನೈಜ್ (23), ಗುರುಪುರದ ಮೊಹಮ್ಮದ್ ಸಾಹಿಲ್ (23), ಮೊಹಮ್ಮದ್ ಫಲಾಹ್ (20), ಇನೋಳಿಯ ಅಬ್ದುಲ್ ಲತೀಫ್ (31) ಬಂಧಿತರು. ಬಂಧಿತರಿಂದ ಒಂದು ಕಾರು ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಸಫ್ವಾನ್ ಎಂಬಾತ ಆರೋಪಿಗಳು ಪೊಲೀಸರ ವಿರುದ್ಧ ನಿಂದನೆಯ ಘೋಷಣೆ ಕೂಗುವುದನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದ. ಕಳೆದ ಶುಕ್ರವಾರ ಮಂಗಳೂರಿನ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ನಡೆದ ಎಸ್ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ಕಾರ್ಯಕರ್ತರ ಗುಂಪೊಂದು, ಪೊಲೀಸರಿಗೆ ನಿಂದಿಸುವ ಘೋಷಣೆಗಳನ್ನು ಕೂಗಿ ಬಂದೋಬಸ್ತ್ನಲ್ಲಿದ್ದ ಪೊಲೀಸರ ಮೇಲೆ ವಾಹನ ಚಲಾಯಿಸಲು ಯತ್ನಿಸಿದ್ದರು. ತಪಾಸಣೆಗೆ ನಿಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Discussion about this post