ಮಂಗಳೂರು: ಇಲ್ಲಿನ ಅಳಿವೆ ಬಾಗಿಲಿನಲ್ಲಿ ಮಂಗಳವಾರ ಸಂಜೆ ಎರಡು ಮೀನುಗಾರಿಕಾ ಬೋಟ್ಗಳು ದುರಂತಕ್ಕೀಡಾಗಿ ಮುಳುಗಡೆಯಾಗಿದ್ದು, ಸಮಯಪ್ರಜ್ಞೆ ಮೆರೆದ ಇತರ ದೋಣಿಗಳ ಸಿಬ್ಬಂದಿ ಎರಡೂ ಬೋಟ್ಗಳಲ್ಲಿದ್ದ 12 ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳ್ಳಾಲದ ಆಲೇಕಲದ ಶರೀಫ್ ಎಂಬವರಿಗೆ ಸೇರಿದ ‘ಮರ್ಮೇಡ್ II’ (ಟ್ರಾಲರ್ ಬೋಟ್) ಹಾಗೂ ಕೂಳೂರಿನ ಬೆಂಗ್ರೆ ಕಸಬಾದ ಅಬೂಬಕ್ಕರ್ ಅಜ್ಮಲ್ ಅವರಿಗೆ ಸೇರಿದ ‘ಅನಿಕ್’ (ಸಣ್ಣ ಮರದ ಬೋಟ್) ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ದರ್ಶನಾ ಕೆ.ಟಿ. ಅವರು, “ಅಳಿವೆ ಬಾಗಿಲಿನಲ್ಲಿ ಸಮುದ್ರದ ಅಲೆಗಳು ಬಲವಾಗಿ ಅಪ್ಪಳಿಸಿದ ಪರಿಣಾಮ ಬೋಟ್ಗಳು ಎತ್ತರಕ್ಕೆ ಜಿಗಿದು ಕೆಳಗೆ ಬಿದ್ದಿವೆ. ಇವೆರಡೂ ಮರದ ಬೋಟ್ ಆಗಿದ್ದರಿಂದ ಕೆಳಭಾಗದ ಹಲಗೆಗಳು ತುಂಡಾಗಿವೆ. ಒಡೆದು ಒಳಗೆ ರಭಸವಾಗಿ ನೀರು ನುಗ್ಗಲು ಪ್ರಾರಂಭವಾಗಿದೆ. 13 ಮೀಟರ್ ಉದ್ದದ ‘ಮರ್ಮೇಡ್’ ಟ್ರಾಲ್ ಬೋಟ್ನ ತಳಭಾಗದ ಹಲಗೆ ತುಂಡಾಗಿ ನೀರು ತುಂಬಿಕೊಂಡರೆ, ಸಣ್ಣ ಬೋಟ್ ಆಗಿರುವ ‘ಅನಿಕ್’ನ ಒಂದು ಪಾರ್ಶ್ವ ಒಡೆದು ಮುಳುಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರ್ಮೇಡ್ ಬೋಟ್ನಲ್ಲಿದ್ದ 7 ಮಂದಿ ಹಾಗೂ ಅನಿಕ್ ಬೋಟ್ನಲ್ಲಿದ್ದ 5 ಮಂದಿ ಸೇರಿದಂತೆ ಎಲ್ಲರನ್ನೂ ಇತರ ಮೀನುಗಾರರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ, ಬೋಟ್ಗಳಿಗೆ ಹಾನಿಯಾಗಿದೆ” ಎಂದು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಈ ಎರಡೂ ಬೋಟ್ಗಳು ಬಂದರಿನಿಂದ ಸಮುದ್ರಕ್ಕಿಳಿದಿದ್ದವು. ಅಳಿವೆ ಬಾಗಿಲಿನಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದವು. ತಕ್ಷಣ, ಸಮೀಪದಲ್ಲಿದ್ದ ಇತರ ಮೀನುಗಾರರು ನೆರವಿಗೆ ಧಾವಿಸಿ ಎಲ್ಲರನ್ನೂ ರಕ್ಷಿಸಿದ್ದಲ್ಲದೇ ತಮ್ಮ ದೋಣಿಗಳಿಗೆ ಹತ್ತಿಸಿಕೊಂಡಿದ್ದಾರೆ. ನಂತರ ಮುಳುಗಡೆಯಾಗುತ್ತಿದ್ದ ದೋಣಿಗಳನ್ನು ದಡಕ್ಕೆ ಎಳೆಯುವ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಈ ಪೈಕಿ ಒಂದು ಬೋಟನ್ನು ಹಗ್ಗ ಕಟ್ಟಿ ಸುರಕ್ಷಿತವಾಗಿ ದಡಕ್ಕೆ ಎಳೆದು ತರುವಲ್ಲಿ ಯಶಸ್ವಿಯಾದರೆ, ಮತ್ತೊಂದು ಬೋಟನ್ನು ಎಳೆದುತರುವಾಗ ಹಗ್ಗ ತುಂಡಾಗಿದ್ದರಿಂದ ಅದು ಪೂರ್ಣಪ್ರಮಾಣದಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದು ಮೀನುಗಾರರು ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post