ಮಂಗಳೂರು: ಮಹಿಳೆಗೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಆಸಿಫ್ ಸೇರಿ ಮೂವರನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲ್ಕಿ ಕಾರ್ನಾಡು ನಿವಾಸಿ ಮೊಹಮ್ಮದ್ ಆಸಿಫ್ (39 ವ), ಮಂಗಳೂರು ಪಂಪ್ ವೆಲ್ ನಿವಾಸಿ ಶಿವಂ ಯಾನೆ ಶಿವಲಿಂಗ (40 ವ), ಮತ್ತು ಮೊಹಮ್ಮದ್ ಅಫ್ತಾಬ್ (32 ವ) ಬಂಧಿತ ಆರೋಪಿಗಳು.
ಪ್ರಕರಣದ ವಿವರ: ಕೋವಿಡ್-19 ಸಮಯದಲ್ಲಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ಮಹಿಳೆ ಕೆಲಸ ಕಳೆದುಕೊಂಡು, ಮನೆಬಾಡಿಗೆ ಕಟ್ಟಲು ತೊಂದರೆಯಾದ ಸಮಯದಲ್ಲಿ ಪಂಪ್ವೆಲ್ನಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಂ ಯಾನೆ ಶಿವಲಿಂಗ ಎಂಬವರ ಬಳಿ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಈ ವೇಳೆ ಶಿವಲಿಂಗನು ಮಹಿಳೆಯನ್ನು ಮೂಲ್ಕಿಯ ಕಾರ್ನಾಡ್ನಲ್ಲಿರುವ ಮೈಮುನಾ ಫೌಂಡೇಷನ್ ನ ಆಶ್ರಮಕ್ಕೆ ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸಿದ್ದರು.
ಮಹಿಳೆ ಒಂದು ವರ್ಷದಿಂದ ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸಂಸ್ಥೆಯಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದ ಶಶಿಧರ್ ಎಂಬಾತ ಗೋಲ್ ಮಾಲ್ ನಡೆಸಿ ಪರಾರಿಯಾಗಿದ್ದ. ಈ ವಂಚನೆಯಲ್ಲಿ ಮಹಿಳೆಯೂ ಪಾಲುದಾರರಾಗಿದ್ದಾರೆಂದು ಆರೋಪಿಸಿ ಆಸಿಫ್ ದೈಹಿಕ ಹಿಂಸೆ ನೀಡುತ್ತಿದ್ದ. ಮಹಿಳೆಯ ಬಳಿಯಿದ್ದ ಮೊಬೈಲ್, ಮೈಕ್ರೋಮ್ಯಾಕ್ಸ್ ಟ್ಯಾಬ್, ಇನ್ನೊಂದು ಸಣ್ಣ ಪೋನ್, ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ಕಸಿದುಕೊಂಡಿದ್ದಾರೆ.
ಮಾ.30 ರಂದು ಮಹಿಳೆಯಿದ್ದ ಕೋಣೆಗೆ ಬಂದ ಆಸಿಫ್ ಜಗಳವಾಡಿ, ನಂತರ ಶಿವಂನನ್ನು ಕರೆಯಿಸಿ, ಮಹಿಳೆಗೆ ಹೊಡೆಯುವಂತೆ ಹೇಳಿದ್ದಾರೆ. ಶಿವಂ ಮಹಿಳೆ ಮುಖಕ್ಕೆ ಕೈಯಿಂದ, ಪ್ಲಾಸ್ಟಿಕ್ ಕುರ್ಚಿಯಿಂದ ಎಡ ಕೈಗೆ ಹೊಡೆದಿದ್ದಾರೆ. ಶಿವಂ ಹೋದ ಬಳಿಕ ಆಸಿಫ್, ಮಹಿಳೆ ಬಳಿ ಶಶಿಧರ್ ಮಾಡಿ ತಪ್ಪನ್ನು ತಾನು ಒಪ್ಪಿ ಬರೆದುಕೊಡುವಂತೆ ಒತ್ತಾಯ ಮಾಡಿ, ಬೆಲ್ಟ್ ನಿಂದ ದೇಹದ ವಿವಿಧ ಭಾಗಕ್ಕೆ ಹೊಡೆದಿದ್ದಾರೆ. ಬಳಿಕ ವಿಕೆಟ್ನಿಂದ ಮಹಿಳೆ ತಲೆಗೆ ಹೊಡೆದಿದ್ದಾರೆ. ಬಳಿಕ ಆಕೆಯನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಮಹಡಿಯಿಂದ ಬಿದ್ದು ಗಾಯಗೊಂಡಿರುವುದಾಗಿ ಸುಳ್ಳು ಹೇಳಲು ಆಸಿಫ್ ಹೇಳಿದ್ದ. ಇಲ್ಲದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಆಸಿಫ್ ಬೆದರಿಕೆ ಹಾಕಿದ್ದು ಚಿಕಿತ್ಸೆ ನೀಡಿದ್ದ ವೈದ್ಯರು ಕೈಗೆ ಪೆಟ್ಟು ಬಿದ್ದ ಜಾಗಕ್ಕೆ ಪ್ಲಾಸ್ಟರ್ ಹಾಕಿದ್ದರು. ಕೈಗೆ ಬಿದ್ದ ಪೆಟ್ಟಿನ ಬಗ್ಗೆ ವೈದ್ಯರಿಗೆ ಅನುಮಾನ ಬಂದಿತ್ತು. ಬಳಿಕ ಮಹಿಳೆ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ಆಸಿಫ್, ಶಿವಲಿಂಗ ಮತ್ತು ಅಫ್ತಾಬ್ ಸೇರಿ ಹಲ್ಲೆಗೈದ ಬಗ್ಗೆ ಪ್ರಕರಣ ದಾಖಲಾಗಿದೆ. ಮಾನಭಂಗ ಯತ್ನ, ಕೊಲೆ ಬೆದರಿಕೆ, ಹಲ್ಲೆಗೈದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Discussion about this post