ಮಂಗಳೂರು: ನಗರದ ಕಂಕನಾಡಿಯಲ್ಲಿರುವ ಕಾಲೇಜ್ ಹಾಸ್ಟೆಲ್ ನ ಬಾತ್ ರೂಮ್ ನಲ್ಲಿ 19 ವರ್ಷದ ನರ್ಸಿಂಗ್ ವಿದ್ಯಾರ್ಥಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಾಸರಗೋಡಿನ ಕಾಡುಮೆನಿ ಗ್ರಾಮದ ನೀಲಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕೋವಿಡ್-19 ಸಾಂಕ್ರಾಮಿಕದಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಪೋಷಕರಿಗೆ ತನ್ನ ಶಿಕ್ಷಣದ ವೆಚ್ಚದೊಂದಿಗೆ ಮತ್ತಷ್ಟು ಹೊರೆಯಾಗಲು ಇಷ್ಟಪಡುವುದಿಲ್ಲ ಎಂದು ಆಕೆ ಡೆತ್ ನೋಟ್ ಬರೆದಿಟ್ಟಿದ್ದಾಳೆ.
ಈಕೆ ಮಂಗಳೂರಿನ ಕೊಲಾಸೋ ನರ್ಸಿಂಗ್ ಕಾಲೇಜಿನ ಬಿಎಸ್ ಸಿ ನರ್ಸಿಂಗ್ ನ ಪ್ರಥಮ ವರ್ಷದ ವಿದ್ಯಾರ್ಥಿನಿ. ಮಂಗಳವಾರ ಸಂಜೆ ಕದ್ರಿಯಲ್ಲಿರುವ ಕಾಲೇಜಿನ ಹಾಸ್ಟೇಲ್ ನ ಬಾತ್ ರೂಮ್ ನಲ್ಲಿ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಾಸ್ಟೇಲ್ ರೂಮ್ ನಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಬಾತ್ ರೂಮ್ ಒಳಗೆ ಪ್ರವೇಶಿಸಿದ ರೂಮ್ ಮೇಟ್ ನೀನಾ ನೇಣು ಬಿಗಿದು ನೇತಾಡುತ್ತಿರುವುದನ್ನು ನೋಡಿ ಆಘಾತಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ್ಮಹತ್ಯೆ ಯತ್ನಿಸಿದ ನೀನಾ ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ.
ಮಂಗಳವಾರ ಬಾತ್ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆಕೆ ಸೋಮವಾರ ಬರೆದಿರುವ ಡೆತ್ ನೋಟ್ ನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಈ ಘಟನೆ ಬುಧವಾರ ತಡವಾಗಿ ಬೆಳಕಿಗೆ ಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
Discussion about this post