ಮಂಗಳೂರು, ಸೆ.6: ಕರಾವಳಿ ಕರ್ನಾಟಕದ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಎಂಎಸ್ಎಂಇಗಳು, ವ್ಯಾಪಾರಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ವಿವಿಧ ಭಾಗೀದಾರರಿಗೆ ಪ್ರಮುಖ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಪ್ರಸ್ತಾಪಿಸಲಾದ ಏಳು ದಿನಗಳ ಕರಾವಳಿ ಕರ್ನಾಟಕ ವಾಣಿಜ್ಯ, ಕೈಗಾರಿಕೆ, ಉದ್ಯಮಶೀಲತೆ ಮತ್ತು ಪ್ರವಾಸೋದ್ಯಮ ಪ್ರದರ್ಶನಕ್ಕೆ ಕರ್ನಾಟಕದ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರು ಉತ್ತೇಜನಕಾರಿ ಪ್ರತಿಕ್ರಿಯೆ ನೀಡಿದ್ದಾರೆ.
ರಚನಾ – ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರಿ ನಿಯೋಗವು ವಿಧಾನ ಪರಿಷತ್ ಸದಸ್ಯ ಹಾಗೂ ರಚನಾದ ಮಾಜಿ ಅಧ್ಯಕ್ಷ ಐವನ್ ಡಿ ಸೋಜ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾಗಿ 2027ರ ಫೆಬ್ರವರಿಯಲ್ಲಿ ಈ ಮಹತ್ವದ ಪ್ರದರ್ಶನವನ್ನು ಆಯೋಜಿಸಲು ಕರ್ನಾಟಕ ಸರ್ಕಾರದ ಸಹಕಾರವನ್ನು ಕೋರಿ ವಿವರವಾದ ಪ್ರಸ್ತಾವನೆ ಯನ್ನು ಸಲ್ಲಿಸಲಾಯಿತು.
ಕರಾವಳಿ ಕರ್ನಾಟಕ ವಾಣಿಜ್ಯ ಮೇಳ ಮತ್ತು ‘ಮಂಗಳೂರನ್ನು ಬ್ರ್ಯಾಂಡ್ ಆಗಿ ರೂಪಿಸುವ’ ರಚನಾ ದೃಷ್ಟಿಕೋನಕ್ಕೆ ಪ್ರವಾಸೋದ್ಯಮ ಸಚಿವರ ಮೆಚ್ಚುಗೆ ವ್ಯಕ್ತಪಡಿಸಿ ಉದ್ಯಮಿಗಳು, ಕೈಗಾರಿಕೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರದ ಭಾಗೀದಾರರನ್ನು ಒಂದೇ ವೇದಿಕೆಗೆ ತರುವ ರಚನಾದ ಈ ಪ್ರಯತ್ನ ಮತ್ತು ಅದರ ದೃಷ್ಟಿಕೋನವನ್ನು ಸಚಿವರು ಶ್ಲಾಘಿಸಿದರು.
ಇಂತಹ ಕಾರ್ಯಕ್ರಮವು ನೆಟ್ವರ್ಕಿಂಗ್, ವ್ಯಾಪಾರ ಅಭಿವೃದ್ಧಿ, ಹೂಡಿಕೆ ಉತ್ತೇಜನ ಹಾಗೂ ಕರಾವಳಿ ಕರ್ನಾಟಕದ ಆರ್ಥಿಕ ಸಾಮರ್ಥ್ಯವನ್ನು ಪ್ರದರ್ಶಿಸಲು ಮಹತ್ವದ ಅವಕಾಶಗಳನ್ನು ಒದಗಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಮಂಗಳೂರಿನ ವಿಮಾನ ನಿಲ್ದಾಣ, ಬಂದರು, ರೈಲು ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕದ ಜೊತೆಗೆ, ಕಡಲತೀರ ಪ್ರವಾಸೋದ್ಯಮ, ದೇವಾಲಯ ಪ್ರವಾಸೋದ್ಯಮ, ಪಾರಂಪರಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ, ಆರೋಗ್ಯ ಸೇವೆ, ಶಿಕ್ಷಣ, ಆತಿಥ್ಯ ಕ್ಷೇತ್ರ, ಐಟಿ ಹಾಗೂ ಉದ್ಯಮಶೀಲತೆ ಸೇರಿದಂತೆ ನಗರದ ವಿಶಿಷ್ಟ ಸಾಮರ್ಥ್ಯ ಗಳನ್ನು ರಚನಾದ ಪದಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಮಂಗಳೂರು ಮತ್ತು ಇಡೀ ಕರಾವಳಿ ಕರ್ನಾಟಕ ಪ್ರದೇಶವನ್ನು ಪ್ರವಾಸೋದ್ಯಮ, ಹೂಡಿಕೆ, ವ್ಯಾಪಾರ ಹಾಗೂ ಪ್ರತಿಭೆಗಳಿಗೆ ಆಕರ್ಷಕ ತಾಣವಾಗಿ ಪರಿಚಯಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಪ್ರಸ್ತಾವಿತ ಪ್ರದರ್ಶನಕ್ಕಾಗಿ ಕರ್ನಾಟಕ ಸರಕಾರದಿಂದ ರೂ. 2 ಕೋಟಿ ಆರ್ಥಿಕ ನೆರವು ನೀಡುವಂತೆ ರಚನಾ ವತಿಯಿಂದ ರಚನಾ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೋ ಮತ್ತು ಉಪಾಧ್ಯಕ್ಷ ಲೆಸ್ಲಿ ರೇಗೊ ಮನವಿ ಮಾಡಿದರು.
ಪ್ರಸ್ತಾವಿತ ಏಳು ದಿನಗಳ ಪ್ರದರ್ಶನವು ಸಾಮಾನ್ಯ ವಾಣಿಜ್ಯ ಮೇಳಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರಲಿದೆ. ಇದರಲ್ಲಿ ವ್ಯಾಪಾರ ಸಂಸ್ಥೆಗಳು, ಉತ್ಪಾದಕರು, ಎಂಎಸ್ಎಂಇಗಳು, ಉದ್ಯಮಿಗಳು, ಸ್ಟಾರ್ಟ್ಅಪ್ಗಳು, ಸೇವಾ ಪೂರೈಕೆದಾರರು, ಹೂಡಿಕೆದಾರರು ಮತ್ತು ಪ್ರವಾಸೋದ್ಯಮ ಕ್ಷೇತ್ರದ ಭಾಗೀದಾರರು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ.
ಇದರ ಜೊತೆಗೆ ಬಿ2ಬಿ ಸಂವಾದಗಳು, ಖರೀದಿದಾರ-ಮಾರಾಟಗಾರರ ಸಭೆಗಳು, ಜ್ಞಾನ ಹಂಚಿಕೆ ಕಾರ್ಯಕ್ರಮ ಗಳು ಹಾಗೂ ನೆಟ್ವರ್ಕಿಂಗ್ ಅವಕಾಶಗಳು ನಡೆಯಲಿವೆ. ಕರಾವಳಿ ಕರ್ನಾಟಕದ ಸಮೃದ್ಧ ಪ್ರವಾಸೋದ್ಯಮ ಸಾಮರ್ಥ್ಯವನ್ನು ಪ್ರದರ್ಶಿಸಲು ವಿಶೇಷ ಪ್ರವಾಸೋದ್ಯಮ ಪೆವಿಲಿಯನ್ ಕೂಡ ಪ್ರಸ್ತಾಪಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post