ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಕುರಿತು ಸ್ಥಳೀಯರು ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನದ ಮುರಿದ್ಕೆಯಿಂದ ಮೊದಲ ಪ್ರತಿಕ್ರಿಯೆ ನೀಡಿದ ಸ್ಥಳೀಯರೊಬ್ಬರು ಭಾರತ ನಡೆಸಿದ ದಾಳಿ ಭಯಾನಕವಾಗಿತ್ತು ಎಂದು ವಿವರಿಸಿದ್ದಾರೆ.
ANI ನ್ಯೂಸ್ಎಕ್ಸ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಪ್ರತ್ಯಕ್ಷದರ್ಶಿಯೊಬ್ಬರು, “ಮಧ್ಯರಾತ್ರಿ 12.45ರ ಸುಮಾರಿಗೆ ಒಂದು ಡ್ರೋನ್ ಬಂತು. ಅದರ ನಂತರ ಮತ್ತೆ ಮೂರು ಡ್ರೋನ್ಗಳು ಬಂದವು. ಅವುಗಳು ಮಸೀದಿಯ ಮೇಲೆ ದಾಳಿ ಮಾಡಿದವು. ಎಲ್ಲವೂ ನಾಶವಾಯ್ತು. ಮಾತ್ರವಲ್ಲ ಎಲ್ಲೆಡೆ ಭಯದ ವಾತಾವರಣ ಸೃಷ್ಟಿಯಾಯಿತು” ಎಂದು ಹೇಳಿದರು.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ನಿಖರವಾದ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಹೊರಬಂದಿದೆ.
ಲಷ್ಕರ್-ಎ-ತೈಬಾ ತರಬೇತಿ ಕೇಂದ್ರ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಮುರಿದ್ಕೆ, ನಿಷೇಧಿತ ಲಷ್ಕರ್-ಎ-ತೈಬಾ (ಎಲ್ಇಟಿ) ನ ತರಬೇತಿ ಮತ್ತು ಸೈದ್ಧಾಂತಿಕ ಕೇಂದ್ರ ಮತ್ತು ಮರ್ಕಜ್ ತೈಬಾದ ನೆಲೆಯಾಗಿದೆ. 2000 ರಲ್ಲಿ ನಂಗಲ್ ಸಹದಾನ್ನಲ್ಲಿ ಸ್ಥಾಪನೆಯಾದ ಈ ನೆಲೆ ಭಯೋತ್ಪಾದಕ ತರಬೇತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಪ್ರತಿ ವರ್ಷ ಸುಮಾರು 1,000 ವಿದ್ಯಾರ್ಥಿಗಳು ವಿವಿಧ ಕೋರ್ಸ್ಗಳಿಗೆ ದಾಖಲಾಗುತ್ತಾರೆ ಎಂದು ವರದಿಯಾಗಿದೆ.
ಅಜ್ಮಲ್ ಕಸಬ್ ತರಬೇತಿ ಪಡೆದಿದ್ದ ಇದೇ ಸ್ಥಳದಲ್ಲಿ: ಇದು ಅಟ್ಟಾರಿ-ವಾಘಾ ಗಡಿಯಿಂದ ಕೇವಲ 25-30 ಕಿಲೋಮೀಟರ್ ದೂರದಲ್ಲಿದೆ. ಅಜ್ಮಲ್ ಕಸಬ್ ಸೇರಿದಂತೆ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಎಲ್ಲಾ ಭಯೋತ್ಪಾದಕರು ಈ ನೆಲೆಯಲ್ಲಿ ಗುಪ್ತಚರ ತರಬೇತಿ ಪಡೆದಿದ್ದರು. ದಾಳಿಯ ಪ್ರಮುಖ ಸಂಚುಕೋರರಾದ ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತು ತಹಾವುರ್ ಹುಸೇನ್ ರಾಣಾ ಕೂಡ ಲಷ್ಕರ್ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿಯ ಸೂಚನೆಯ ಮೇರೆಗೆ ಮುರಿದ್ಕೆಗೆ ಬಂದಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post