ಸುರತ್ಕಲ್: ಬೈಕಂಪಾಡಿ ಮೀನಕಳಿಯ ಬಳಿ ಹಲ್ಲೆಗೊಳಗಾಗಿದ್ದ ರೌಡಿ ಶೀಟರ್ ರಾಘವೇಂದ್ರ ಅಲಿಯಾಸ್ ರಾಜ (29) ಚಿಕಿತ್ಸೆ ಫಲಿಸದೇ ಮಂಗಳವಾರ ಕೊನೆಯುಸಿರೆಳೆದರು.
ಮೀನಕಳಿಯ ಕಡಲ ಕಿನಾರೆ ಬಳಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ರಾಘವೇಂದ್ರಗೆ ಚಾಕು ಹಾಗೂ ಮಾರಾಕಾಯುಧಗಳಿಂದ ಇರಿದು ಪರಾರಿಯಾಗಿದ್ದರು. ತಲೆ, ಮುಖ, ಕೈಗಳಿಗೆ ಗಾಯಗಳಾಗಿದ್ದ ರಾಘವೇಂದ್ರ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ರಾಘವೇಂದ್ರನ ಸ್ನೇಹಿತರೇ ಈ ಕೊಲೆ ಮಾಡಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಘವೇಂದ್ರ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದ ರಾಘವೇಂದ್ರ ವಿರುದ್ಧ ರೌಡಿ ಶೀಟ್ ತೆರೆಯಲಾಗಿತ್ತು.
Discussion about this post