ಮಂಗಳೂರು, ಫೆ.8: ನೀರಿನ ಪೈಪ್ ಲೈನ್ ಕಾಮಗಾರಿ ಹೆಸರಲ್ಲಿ ಒಂದು ದಿನ ನೀರು ಪೂರೈಕೆ ಕಡಿತಗೊಳಿಸಿದ್ದ ಮಹಾನಗರ ಪಾಲಿಕೆ ಮಂಗಳೂರಿನ ಬಹುತೇಕ ಪ್ರದೇಶಗಳಿಗೆ ಮೂರು ದಿನವಾದರೂ ನೀರು ಪೂರೈಕೆ ಮರು ಸ್ಥಾಪಿಸಿಲ್ಲ. ಇದರಿಂದಾಗಿ ನೀರು ಬಾರದೆ ಜನರು ಸಂಕಷ್ಟ ಪಡುವಂತಾಗಿದೆ.
ಮಹಾನಗರ ಪಾಲಿಕೆಯು, ಫೆ.5 ರಂದು ಪ್ರಕಟಣೆ ಹೊರಡಿಸಿದ ಪ್ರಕಾರ, ಬೆಂದೂರ್ವೆಲ್ ಬಳಿ ಬೃಹತ್ ಪ್ಲೋಮೀಟರ್ ಪೈಪ್ ಅನ್ನು ಸ್ಥಾಪಿಸುವ ಅಂಗವಾಗಿ ಫೆಬ್ರವರಿ 6 ರಂದು ಬೆಳಗ್ಗೆ 6 ರಿಂದ ಫೆಬ್ರವರಿ 7 ರ ಬೆಳಗ್ಗೆ 6ರ ವರೆಗೆ ಕಾಮಗಾರಿಯ ಪ್ರಯುಕ್ತ ನೀರು ಪೂರೈಕೆ ಸ್ಥಗಿತಗೊಳಿಸಲಿದ್ದಾರೆ. ಪೈಪ್ಲೈನ್ನ ದುರಸ್ತಿ ಕಾರ್ಯವು ಬಿರುಸಿನಿಂದ ನಡೆಯುತ್ತಿದ್ದರೂ ಸತತ ಮೂರು ದಿನದಿಂದ ನಗರದ ಬಹುತೇಕ ಕಡೆ ನೀರು ಲಭ್ಯವಾಗಲಿಲ್ಲ. ವಸತಿ ಸಮುಚ್ಚಯಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗಿದೆ ಎನ್ನಲಾಗಿದೆ.
ನಗರದ ಬಂದರು, ಕೊಡಿಯಾಲಬೈಲು, ಕದ್ರಿ, ಪಿವಿಎಸ್, ಲೇಡಿಹಿಲ್, ಜಲ್ಲಿಗುಡ್ಡೆ, ಕೋಡಿಕಲ್, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ನಾಗುರಿ, ಕೂಳೂರು, ಪಣಂಬೂರು ಸುರತ್ಕಲ್, ಕಾಟಿಪಳ್ಳ, ಕಾನ, ಕುಳಾಯಿ, ಮುಕ್ಕ ಮತ್ತಿತರ ಪ್ರದೇಶಗಳಲ್ಲಿ ಜನರು ನೀರಿನ ಸಮಸ್ಯೆ ಎದುರಿಸುವಂತಾಯಿತು. ಹಾನಿಯಾಗಿರುವ ನೀರಿನ ಪೈಪ್ಲೈನ್ನ ದುರಸ್ತಿ ಕಾಮಗಾರಿಯು ಗುರುವಾರವೂ ಮುಂದುವರಿದಿದ್ದು, ಶುಕ್ರವಾರದಿಂದ ನೀರು ಸರಬರಾಜು ಮತ್ತೆ ಆರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
Discussion about this post