ಮಂಗಳೂರು, ಜುಲೈ 9 ಸುರತ್ಕಲ್ ಬಳಿಯ ಮಸೀದಿಯೊಂದಕ್ಕೆ ಏಕಾಏಕಿ ನುಗ್ಗಿ ಅಲ್ಲಿನ ಮದ್ರಸಾ ಉಸ್ತಾದ್ ಗೆ ಹಲ್ಲೆಗೈದು ಬಹಿರಂಗವಾಗಿ ಕೊಲೆ ಬೆದರಿಕೆ ಒಡ್ಡಿದ ಘಟನೆಯ ವಿಡಿಯೋ ವೈರಲ್ ಆಗಿದ್ದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ತಮ್ಮನ ಮಗನಿಗೆ ಮದರಸ ಅಧ್ಯಾಪಕರಾದ ಉಡುಪಿ ಜಿಲ್ಲೆಯ ಹೆಜಮಾಡಿ ನಿವಾಸಿ ಉಮರ್ ಫಾರೂಕ್ ಸಖಾಫಿ ಎಂಬವರು ಹೊಡೆದಿದ್ದಾರೆ ಎಂದು ಆರೋಪಿಸಿ ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ಶಂಸುದ್ದೀನ್ ಎಂಬಾತ ಕೃಷ್ಣಾಪುರದ ತ್ವೈಬಾ ಮಸೀದಿಗೆ ಅಕ್ರಮ ಪ್ರವೇಶಿಸಿ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಆಡಳಿಯ ಮಂಡಳಿ ಸುರತ್ಕಲ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ.

ಘಟನೆಗೆ ಸಂಬಂಧಿಸಿ ಹಲ್ಲೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಶಂಸುದ್ದೀನ್ ನನ್ನು ಸುರತ್ಕಲ್ ಮೂಡ ಮಾಡುಕಟ್ಟೆಯಲ್ಲಿದ್ದ ಆತನ ಮೊಬೈಲ್ ಅಂಗಡಿಯಿಂದ ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿರಿಸಿದ್ದರು.
ಮದರಸದಲ್ಲಿ 12 ವರ್ಷದ ಬಾಲಕನಿಗೆ ಉಸ್ತಾದ್ ಉಮರ್ ಫಾರೂಕ್ ಬೆತ್ತದಿಂದ ಹೊಡೆದಿದ್ದು ಇದರ ಸಿಟ್ಟಿನಿಂದ ಉಸ್ತಾದ್ ಮೇಲೆ ಹಲ್ಲೆ ನಡೆಸಲಾಗಿತ್ತು. ಏಕಾಏಕಿ ಮದರಸಕ್ಕೆ ನುಗ್ಗಿ ಹಲ್ಲೆ ನಡೆಸಿದ್ದು ಇದರ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಬದ್ರಿಯಾ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಎಂ.ಎ ಹನೀಫ್ ನೀಡಿದ ದೂರಿನ ಅನ್ವಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸಂಶುದ್ದಿನ್ ಹಾಗೂ ಆತನ ಪತ್ನಿಯ ವಿರುದ್ದ ಪ್ರಕರಣ ದಾಖಲಾಗಿದೆ. BNS ಕಲಂ: 329(1), 115(2), 352, 351(2), 351(3), 3(5) ಅಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Discover more from Coastal Times Kannada
Subscribe to get the latest posts sent to your email.







Discussion about this post