ಮಂಗಳೂರು, ಜುಲೈ 8ನಗರದ ಕೆಪಿಟಿ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಡಿವೈಡರ್ ಮೇಲೆ ಬಿದ್ದು ಬೈಕ್ ಸವಾರಿ ಮಾಡುತ್ತಿದ್ದ ಬಿಎಸ್ಎಫ್ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೂಲತಃ ಕಡಬ ತಾಲೂಕಿನ ಕೊಯ್ಲ ಗ್ರಾಮದ ನಿವಾಸಿ, ಸದ್ಯ ಸುರತ್ಕಲ್ ಬಳಿಯ ಪೆರ್ಮುದೆ ಎಂಬಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಿದ್ದ ಸೀತಾರಾಮ ಗೌಡ (47) ಮೃತರು. ಇವರು ಸಿಐಎಸ್ಎಫ್ ಸಿಬಂದಿಯಾಗಿದ್ದು, ಜಮ್ಮು ಕಾಶ್ಮೀರದ ಜಮ್ಮುವಿನಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ಕರ್ತವ್ಯದಲ್ಲಿದ್ದರು. ಇತ್ತೀಚೆಗೆ ರಜೆಯಲ್ಲಿ ಊರಿಗೆ ಬಂದಿದ್ದರು.

ಮತಪಟ್ಟಿ ಪರಿಷ್ಕರಣೆ- ಎಸ್ಐಆರ್ ಆಗುತ್ತಿರುವ ಹಿನ್ನೆಲೆಯಲ್ಲಿ ದಾಖಲೆಗಳನ್ನು ಕೊಡುವುದಕ್ಕಾಗಿ ತನ್ನ ಊರು ಕಡಬಕ್ಕೆ ತೆರಳಿ ಅಲ್ಲಿಂದ ಬೈಕಿನಲ್ಲಿ ಹಿಂತಿರುಗುತ್ತಿದ್ದರು. ಕೆಪಿಟಿ ಜಂಕ್ಷನ್ ದಾಟಿ ಮುಂದಿನ ಎಸ್ ಕೆಎಸ್ ಫ್ಲಾಟ್ ಮುಂಭಾಗದಲ್ಲಿ ಇವರ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಏರಿ ಹೋಗಿದ್ದು, ಪಲ್ಟಿಯಾಗಿ ಬಿದ್ದಿದೆ. ಅಪಘಾತ ಹೇಗಾಯ್ತು ಅನ್ನುವುದು ಸ್ಪಷ್ಟವಾಗಿಲ್ಲ, ತನಿಖೆ ನಡೆಸುವುದಾಗಿ ಕದ್ರಿ ಪೊಲೀಸರು ತಿಳಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ತಲೆಗೆ ಏಟು ಬಿದ್ದಿದ್ದರಿಂದ ಮೃತಪಟ್ಟಿದ್ದಾರೆ. ಸೀತಾರಾಮ ಗೌಡ ಅವರು ಪತ್ನಿ, ಮಗಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.

Discover more from Coastal Times Kannada
Subscribe to get the latest posts sent to your email.







Discussion about this post