ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ವರ್ಷವಾರು ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಈ ಮೂರು ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಗೌರವಿಸಲಾಗುತ್ತಿದ್ದು, ಪ್ರಸ್ತುತ ಸಾಲಿನಲ್ಲಿ 2024 ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಹಾಗೂ ಪುಸ್ತಕ ಪುರಸ್ಕಾರಕ್ಕಾಗಿ( ಕೊಂಕಣಿ ಸಾಹಿತ್ಯ ) ಎಂ. ಪ್ಯಾಟ್ರಿಕ್ ಮೊರಾಸ್, ( ಕೊಂಕಣಿ ಕಲೆ ) ಜೊಯಲ್ ಪಿರೇರಾ, (ಕೊಂಕಣಿ ಜಾನಪದ) ಸೊಬೀನಾ ಮೊತೇಶ್ ಕಾಂಬ್ರೆಕರ್, ಹಳಿಯಾಳ ಮತ್ತು 2024ನೇ ಸಾಲಿನ ಪುಸ್ತಕ ಪುರಸ್ಕಾರಕ್ಕೆ (ಕೊಂಕಣಿ – ಕವನ ಪುಸ್ತಕ “ಪಾಲ್ವಾ ಪೊಂತ್”) – ಫೆಲ್ಸಿ ಲೋಬೊ, ದೆರೆಬೈಲ್, ( ಕೊಂಕಣಿ ಲೇಖನ ಪುಸ್ತಕ ಶೆತಾಂ ಭಾಟಾಂ ತೊಟಾಂನಿ) -ವೆಲೇರಿಯನ್ ಸಿಕ್ವೇರಾ ಕಾರ್ಕಳ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರೀಸ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಮೈಸೂರು ಸಹಯೋಗದೊಂದಿಗೆ ಮಾ.23, 2025, ರಂದು ಸಂಜೆ 5.00 ಗಂಟೆಗೆ ಕೊಂಕಣ್ ಭವನ್, ವಿಜಯನಗರ್ 2 ಸ್ಟೇಜ್, ಮೈಸೂರಿನಲ್ಲಿ ಜರುಗಲಿರುವುದು. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಗೌರವ ಪ್ರಶಸ್ತಿಯು ರೂ.50,000/- ನಗದು, ಪ್ರಮಾಣ ಪತ್ರ, ಶಾಲು, ಹಾರ, ಪೇಟ, ಸ್ಮರಣಿಕೆ, ಫಲಪುಷ್ಪಗಳನ್ನು ಒಳಗೊಂಡಿದೆ. ಪುಸ್ತಕ ಪುರಸ್ಕಾರವು ರೂ.25,000/- ನಗದು, ಪ್ರಮಾಣ ಪತ್ರ, ಶಾಲು, ಹಾರ, ಸ್ಮರಣಿಕೆ ಫಲಪುಷ್ಪಗಳನ್ನು ಒಳಗೊಂಡಿದೆ ಎಂದವರು ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿದ್ದಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್, ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಲಿರುವುದು. ಕೊಂಕಣಿ ಜಿ.ಎಸ್.ಬಿ. ಸಭಾ, ಮೈಸೂರು ಮತ್ತು ಮುರುಡೇಶ್ವರ ನವಾಯತ್ ಅಸೋಸಿಯೇಶನ್ ಮೈಸೂರು ಇವರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದಾರೆ.
ಕೊಂಕಣಿ ಸಾಹಿತ್ಯ ಗೌರವ ಪ್ರಶಸ್ತಿ ಪುರಸ್ಕೃತರು: ಪ್ಯಾಟ್ರಿಕ್ ಕಾಮಿಲ್ ಮೊರಾಸ್ (ಎಮ್. ಪ್ಯಾಟ್ರಿಕ್) : ಕೊಂಕಣಿ ಸಾಹಿತ್ಯ ಹಾಗೂ ಪತ್ರಿಕಾರಂಗದ ಓರ್ವ ಅರ್ಪಣಾ ಮನೋಭಾವದ ಸಾಹಿತಿ. ಕೊಂಕಣಿ ಸಾಹಿತ್ಯ ಭಂಡಾರಕ್ಕೆ 400ಕ್ಕೂ ಮಿಕ್ಕಿ ಕಥೆಗಳನ್ನು, ಪ್ರಸ್ತುತ ಪರಿಸ್ಥಿತಿ ವಿಷಯಗಳ ಮೇಲೆ ಲೇಖನಗಳನ್ನು, 8 ಕಾದಂಬರಿಗಳನ್ನು ಹಾಗೂ 2 ನಾಟಕಗಳನ್ನು ರಚಿಸಿದ್ದಾರೆ. ಮಳೆ ಬಿಸಿಲು ಲೆಕ್ಕಿಸದೆ, ಕೊಂಕಣಿ ಪುಸ್ತಕಗಳನ್ನು ತಲೆ ಮೇಲೆ ಹೊತ್ತುಕೊಂಡು ಮನೆಮನೆಗಳಲ್ಲಿ ಕೊಂಕಣಿ ಪುಸ್ತಕಗಳನ್ನು ಮುಟ್ಟಿಸಿದಂತಹ ಪ್ರಥಮ ವ್ಯಕ್ತಿ. ತಮ್ಮದೇ ಆದ ʼನಿತ್ಯಾಧರ್ ಪ್ರಕಾಶನ್ʼ ಸ್ಥಾಪಿಸಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತಿರಸ್ಕಾರ್, ಹಾಂವ್ ತುಕಾ ಭಾಗಿ ಕರ್ತಲೊಂ, ಮಸ್ತಿಲ್ಲೆಂ ಫುಲ್, ತುಂ ಮ್ಹಜೆಂಚ್ ಬಾ, ಒಲಿವಿಯಾ ವಜ್ರಾಂಚೊ ಕುರೊವ್, ಬೆಸಾಂವ್, ನರ್ಸ್ ಗ್ಲೋರಿಯಾ, ಕಾದಂಬರಿಗಳು, ಲಿಪ್ಲಲೊ ಸಾಳಿಯೊ ಪತ್ತೇದಾರಿ ಕಾದಂಬರಿ, ಆವಯ್ಚೆಂ ಕಾಳಿಜ್ ಆನಿ ಇತರ್ ಕಾಣಿಯೊ ಪ್ರಕಟಗೊಂಡಿವೆ. ವಾಗ್ ಮಾರ್ಲೊ ವಿನೋದಿತ ಕಿರುನಾಟಕ, ತುಂವೆಂಚ್ ವಿಕ್ರೀತ್ ಕೆಲೆಂಯ್, ಪತ್ತೇದಾರಿ ನಾಟಕ, ಫಾರಿಕ್ಪಣ್ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ಕೊಂಕಣಿ ಕಲಾ ಗೌರವ ಪ್ರಶಸ್ತಿ ಪುರಸ್ಕೃತರು : ಶ್ರೀ ಅಲೆಕ್ಸಾಂಡರ್ ಜೋಯೆಲ್ ಪಿರೇರಾ: ಸಂಗೀತ ಗುರು ಬಿರುದಾಂಕಿತ ಜೊಯೆಲ್ ಪಿರೇರಾರವರು ಮಂಗಳೂರಿನ ಬಿಜೈನಲ್ಲಿ ಜನಿಸಿದರು. ಇವರು ಬಾಲ್ಯದಿಂದಲೇ ಸಂಗೀತ ಆಸಕ್ತಿ ಹೊಂದಿದವರು. ಸಂಗೀತ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಹೊಂದಿರುವ ಇವರು ಪಿಯಾನೊ, ಅಕಾರ್ಡಿಯನ್, ವಯೊಲಿನ್, ಮ್ಯಾಂಡೊಲಿನ್, ಟ್ಯೂಬ್ಯುಲರ್,ಯುಪೋನಿಯಮ್, ಕಾರ್ನೆಟ್, ಸರ್ಕಲ್ ಬಾಸ್, ಸಿತಾರಾ ಮುಂತಾದ ಹಿತ್ತಾಳೆ ವಾದ್ಯಗಳನ್ನು ನುಡಿಸುತ್ತಾರೆ. ಕೊಂಕಣಿ ಕ್ರಿಶ್ಚಿಯನ್ ಸಮುದಾಯದಲ್ಲಿ ಉಳಿದಿರುವ ಎಕೈಕ ಜಾನಪದ ಸಂಗೀತ ಸಾಧನವಾದ “ಗುಮಟ್” ಅನ್ನು ಬಾರಿಸುತ್ತಾ “ಗುಮ್ಟಾಂ ಹಾಡುಗಳನ್ನು ಹಾಡುವುದು, ಕೊಂಕಣಿ, ಇಂಗ್ಲೀಷ್, ಮಲಯಾಳಂ, ಕನ್ನಡ, ತುಳು ಭಾಷೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚಿನ ಆಲ್ಬಮ್ ಗಳಿಗೆ ಸಂಗೀತ ಸಂಯೋಜನೆ/ವ್ಯವಸ್ಥೆ ಮಾಡಿರುವ ಇವರು 2007 ರಲ್ಲಿ ಕಲಾಂಗಣ್ ನಲ್ಲಿ 40 ಗಂಟೆಗಳ ಕಲಾ ನಡೆದ ನಿರಂತರ ಗಾಯನ “ಕೊಂಕಣಿ ನಿರಂತರಿ” ಸಂಗೀತ ಕಾರ್ಯಕ್ರಮ ನಿರ್ದೇಶಕರಾಗಿ, ಗಿನ್ನಿಸ್ ವಿಶ್ವದಾಖಲೆ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.
ಕೊಂಕಣಿ ಬೈಬಲ್ ನಾಟಕಗಳು-6 ಸಾಮಾಜಿಕ ನಾಟಕಗಳು-4 ಮಾಟಮಂತ್ರ ಆಚರಣೆಗಳು/ಮಾನಸಿಕ/ವೈಜ್ಞಾನಿಕ ವಿಶ್ಲೇಷಣೆಯ ಕುರಿತು ಸರ್ಣೆತಾಂ ಶೀರ್ಷಿಕೆಯ ಕೊಂಕಣಿ ಕಾದಂಬರಿ, ಇವರು ರಚಿಸಿರುವ ಸಾಹಿತ್ಯ ಕೃತಿಗಳಾಗಿರುತ್ತವೆ. ಸಿನೇಮಾ ಕ್ಷೇತ್ರದಲ್ಲಿಯೂ ಇವರು ದುಡಿದಿದ್ದಾರೆ.
ಕೊಂಕಣಿ ಜಾನಪದ ಗೌರವ ಪ್ರಶಸ್ತಿ ಪುರಸ್ಕೃತರು : ಸೊಬೀನ ಮೊತೇಶ್ ಕಾಂಬ್ರೆಕರ್ : ಇವರು ಸಿದ್ದಿ ಬುಡಕಟ್ಟು ಸಮುದಾಯದ ಮಹಿಳೆ ಇವರು ಸಿದ್ದಿ ಸಂಸ್ಕೃತಿ ಕಕಲಾತಂಡದ ಅಧ್ಯಕ್ಷರು. ಇವರು ಸುಮಾರು 20 ವರ್ಷ ಮೇಲ್ಪಟ್ಟು ತನ್ನ ಕಲೆಯನ್ನ ಬಿತ್ತರಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಜಿಲ್ಲೆಗಳಲ್ಲಿ, ಹೊರನಾಡುಗಳಲ್ಲಿ,ಹೊರರಾಜ್ಯಗಳಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಲೆಯನ್ನು ಬಿತ್ತರಿಸಿದ್ದಾರೆ. ತಮ್ಮ ಕಲೆಯನ್ನು ಹಸ್ತಾಂತರಿಸುವಂತಹ ಗುರು-ಶಿಷ್ಯ ಪರಂಪರೆ ಅಡಿಯಲ್ಲಿ ತರಬೇತಿಗಳನ್ನು ನೀಡಿರುತ್ತಾರೆ. ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮ, ಆರೋಗ್ಯದ ಕುರಿತಂತೆ ಜನ ಜಾಗ್ರತಿ ಕಾರ್ಯಕ್ರಮಗಳು ಹೀಗೆ ಹಲವಾರು ವಿಚಾರಗಳ ಬಗ್ಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವಂತಹ ಕೆಲಸದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಾರೆ. ಇವರು ದಮಾಮಿ ನೃತ್ಯ, ಪುಗಡಿ ನೃತ್ಯ ಹಾಗೂ ಸಿಗ್ಮೋ ನೃತ್ಯ ಹಾಗೂ ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣಿತರಾಗಿದ್ದಾರೆ. ಇವರಿಗೆ ದಮಾಮಿ ನೃತ್ಯಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2015 ಪಡೆದಿದ್ದಾರೆ. ಜಾನಪದ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ.
ಪುಸ್ತಕ ಪುರಸ್ಕೃತ ಕವನ ಪುಸ್ತಕ : “ಪಾಲ್ವಾ ಪೊಂತ್” : ಲೇಖಕರು : ಶ್ರೀಮತಿ ಫೆಲ್ಸಿಲೋಬೊ, ದೆರೆಬಯ್ಲ್ಶಾಲಾ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಲು ವಿವಿಧ ಕೊಂಕಣಿ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ, ಎಲ್ಲಾ ಕೊಂಕಣಿ ಪತ್ರಿಕೆಗಳಲ್ಲಿ ಲೇಖನ, ಕವಿತೆ, ವಿಡಂಬನೆ, ಲಲಿತಪ್ರಬಂಧ ಪ್ರಕಟಿಸುತ್ತಾ ಬಂದಿರುತ್ತಾರೆ. ಕೊಂಕಣಿ ಸಾಹಿತ್ಯ ಕೃಷಿಯಲ್ಲಿ ಕ್ರೀಯಾಶೀಲರಾಗಿರುವ ಇವರು “ಗರ್ಜೆ ತೆಕಿದ್ ಗಜಾಲಿ” ಲೇಖನ ಪ್ರಕಟಿಸಿರುತ್ತಾರೆ. ಹಾಗೂ ಇವರು ಬರೆದಿರುವ “ಆಪಾಲಿಪಾ” ಮಕ್ಕಳ ಕವಿತೆ ಪುಸ್ತಕವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿರುತ್ತದೆ. ಇವರ ಲೇಖನಗಳು ಹೆಚ್ಚಾಗಿ ಎಲ್ಲಾ ಕೊಂಕಣಿ ಪತ್ರಗಳಲ್ಲಿ ಮತ್ತು ಹಲವು ಜಾಲತಾಣಗಳಲ್ಲಿ ಸರಾಗವಾಗಿ ಪ್ರಸಾರಗೊಳ್ಳುತ್ತವೆ. ವಿನೋದ, ಲಲಿತಪ್ರಬಂಧ, ಕವಿತೆ ಮತ್ತು ಲೇಖನ ವಿಭಾಗಗಳಲ್ಲಿ ಅನೇಕ ಬಹುಮಾನಗಳು ಲಭಿಸಿವೆ. ಆಕಾಶವಾಣಿ ಮಂಗಳೂರು, ರೇಡಿಯೊ ಹಾಗೂ ರೇಡಿಯೊ ಸಾರಂಗ್ ಇವುಗಳಲ್ಲಿ ಭಾಷಣ, ಕವಿತೆಗಳು, ಪ್ರಸಾರಗೊಂಡಿವೆ. ಅನೇಕ ಕವಿಗೋಷ್ಟಿಗಳಲ್ಲಿ ಇವರು ಕೊಂಕಣಿ, ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕವಿತೆ ಪ್ರಸ್ತುತ ಪಡಿಸಿರುತ್ತಾರೆ.
ಪುಸ್ತಕ ಪುರಸ್ಕೃತ ಕೊಂಕಣಿ ಲೇಖನ ಪುಸ್ತಕ : “ಶೆತಾಂ ಭಾಟಾಂ ತೊಟಾಂನಿ” : ಲೇಖಕರು: ವಲೇರಿಯನ್ ಸಿಕ್ವೇರಾ ( ವಲ್ಲಿ ಬೋಳ)ವಲ್ಲಿ ಬೋಳ ನಾಮಾಂಕಿತದಲ್ಲಿ ಬರೆಯುವ ವಲೇರಿಯನ್ ಸಿಕ್ವೇರಾರವರು 4 ಆಗಸ್ಟ್ 1959 ಇಸವಿಯಲ್ಲಿ ಕಾರ್ಕಳ ತಾಲೂಕಿನ ಬೋಳ ಎಂಬಲ್ಲಿ ಜನಿಸಿದರು. ಇವರದು ಸಾಂಪ್ರದಾಯಿಕ ಕೃಷಿ ಕುಟುಂಬ. 1983ರಲ್ಲಿ ಪಯ್ಣಾರಿ ಪತ್ರಿಕೆಗೆ ಬರೆಯುವ ಮುಖಾಂತರ ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದ ಇವರು ಸಾಮಾಜಿಕ, ಕೃಷಿ, ಸಂಪ್ರದಾಯ, ಪರಿಸರ, ಜಾಗೃತಿ ಮತ್ತು ಜೀವನದ ಸತ್ಯಗಳು. ಹೀಗೆ ಅನೇಕ ವಿಷಯಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.
ಕಳೆದ 41 ವರುಷಗಳಿಂದ ಇವರ ಸಾವಿರಕ್ಕೂ ಮಿಕ್ಕಿ ಕೊಂಕಣಿ, ತುಳು, ಕನ್ನಡ ಭಾಷೆಗಳಲ್ಲಿ ಲೇಖನ, ಕಥೆ, ಕವಿತೆ, ವಿಡಂಬನೆ, ಪ್ರಬಂಧ, ಚುಟುಕು, ಹಾಗೂ ನುಡಿಗಟ್ಟುಗಳು ವಿವಿಧ ಮಾಧ್ಯಮಗಳಲ್ಲಿ ಪ್ರಸಾರಗೊಂಡಿವೆ. ಸಾಂಗ್ಣ್ಯಾ ತುಪೆಂ (ಎರಡು ಆವೃತ್ತಿ), ಗಾದ್ಯಾ ಮೆರೆರ್, ಜಗ್ಲಾಣೆ, ಎಂಬ ಕೊಂಕಣಿ ಹಾಗೂ ಪೂಂಬೆ ಎಂಬ ತುಳು ಪುಸ್ತಕಗಳು ಪ್ರಕಟಗೊಂಡಿವೆ. ನಾಡಾಕ್ ವಚುಯಾಂ, ಪಾಚ್ವಿ ಪಾಂತ್, ಲಾಂಪ್ಯಾಂವ್, ಮಯ್ಲಾ ಫಾತರ್, ಲಿಸಾಂವ್ ಆನಿ ಸ್ಥೆಸಾಂವ್, ಜಾಣ್ವಾಯೆಚ್ಯೊ ಸಾಂಗ್ಣ್ಯೊ, ಮಾತಿ ಆನಿ ಸತಾಂ, ಮಾಸ್ಳೆಚಿಂ ಮೆಟಾಂ, ಕೃಷಿ-ಕಶಿ ಎಂಬ ಕೊಂಕಣಿ ಹಾಗೂ ಪಚ್ಚನಿರೆ ಎಂಬ ತುಳು ಅಂಕಣಗಳನ್ನು ಬರೆದಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post