ಹುಬ್ಬಳ್ಳಿ: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪಿ ಬಿಹಾರ ಮೂಲದ ರಿತೇಶ ಕುಮಾರ್ (35) ಎಂಬಾತ ಭಾನುವಾರ ಸಂಜೆ ನಗರದ ತಾರಿಹಾಳ ಸೇತುವೆ ಬಳಿ ಪೊಲೀಸರ ಗುಂಡೇಟಿಗೆ ಮೃತಪಟ್ಟಿದ್ದಾನೆ.
ಈ ಕುರಿತಂತೆ ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದ್ದು, ”ಆರೋಪಿ ವಶಕ್ಕೆ ಪಡೆದು ಆತನು ವಾಸಿಸುತ್ತಿದ್ದ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ಮಾಡುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಮಹಿಳಾ ಪಿಎಸ್ಐ ಅನ್ನಪೂರ್ಣ ಅವರು ಮೊದಲು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದರೂ ಸಹ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ನಂತರ ಗುಂಡು ಹಾರಿಸಿದಾಗ ಆತನ ಬೆನ್ನಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನು ಚಿಕಿತ್ಸೆಗೆಂದು ಕೆಎಂಸಿಆರ್ಐ ಆಸ್ಪತ್ರೆಗೆ ಕರೆತಂದಿದ್ದಾಗ ವೈದ್ಯರು ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ” ಎಂದು ಮಾಹಿತಿ ನೀಡಿದರು.
‘ಬಿಹಾರ ಪಾಟ್ನಾದ ನಿವಾಸಿಯಾದ ಆರೋಪಿ ರಿತೀಶ ಕುಮಾರ್ ಭಾನುವಾರ ಬೆಳಿಗ್ಗೆ 10.40ರ ಸುಮಾರು ವಿಜಯನಗರದ ವಾಸವಾಗಿದ್ದ ಬಾಲಕಿಗೆ ತಿಂಡಿ ತಿನಿಸುಗಳನ್ನು ನೀಡುವುದಾಗಿ ಪುಸಲಾಯಿಸಿ ಕರೆದಿದ್ದಾನೆ. ನಂತರ ಅವಳನ್ನು ಎತ್ತಿಹಾಕಿಕೊಂಡು ಎದುರಿನ ಮನೆಯಲ್ಲಿರುವ ಶೆಡ್ಗೆ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆ ಕೂಗಿಕೊಂಡಾಗ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಾಲಕಿಯ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ಹಿಡಿದು ಅಶೋಕ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ಶಶಿಕುಮಾರ್ ತಿಳಿಸಿದರು.
ಬಾಲಕಿ ಕೊಲೆ ಖಂಡಿಸಿ ಪ್ರತಿಭಟನೆ: ಬಾಲಕಿ ಕೊಲೆ ಮಾಡಿರುವ ಆರೋಪಿಯನ್ನು ತಮ್ಮ ವಶಕ್ಕೆ ನೀಡಿ ಹಾಗೂ ಗುಂಡು ಹಾರಿಸಿ ಹತ್ಯೆ ಮಾಡಲು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಅಶೋಕ ನಗರದ ಪೊಲೀಸ್ ಠಾಣೆ ಎದುರು ಸೇರಿದಂತೆ ವಿವಿಧೆಡೆ ತೀವ್ರ ಪ್ರತಿಭಟನೆ ನಡೆಸಿದರು. ನಗರದ ರಾಣಿ ಚೆನ್ನಮ್ಮ ವೃತ್ತ, ಕೆಎಂಸಿಆರ್ಐ ಶವಾಗಾರ, ಕೆಎಂಸಿಆರ್ಐ ಮುಖ್ಯ ದ್ವಾರ ಬಳಿ ಹು-ಧಾ ಮುಖ್ಯ ರಸ್ತೆ ಬಂದ್ ಮಾಡಿ, ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿ ಎನ್ಕೌಂಟರ್ನಿಂದ ಮೃತಪಟ್ಟ ವಿಷಯ ತಿಳಿದು ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟು ಕೆಎಂಸಿ ಆಸ್ಪತ್ರೆ ಎದುರು ಸಂಭ್ರಮಿಸಿದರು. ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಜೈಕಾರ ಹಾಕಿದರು.
Discover more from Coastal Times Kannada
Subscribe to get the latest posts sent to your email.
Discussion about this post