ನೆಲ್ಯಾಡಿ: ಗುಂಡ್ಯದಲ್ಲಿ ನಿಲ್ಲಿಸಿದ್ದ ಲಾರಿಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ರಬ್ಬರ್ಶೀಟ್ ಕಳವುಗೊಂಡಿರುವ ಪ್ರಕರಣವೊಂದು ಕೆಲ ದಿನಗಳ ಹಿಂದೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳನ್ನು ಕಡಬ ಶಿರಾಡಿ ಗ್ರಾಮದ ಮಿತ್ತಮಜಲು ನಿವಾಸಿ ತೋಮಸ್ (33), ಎಡಪ್ಪಾಟ್ ನಿವಾಸಿ ಇ.ಪಿ ವರ್ಗಿಸ್(48), ಪೇರಮಜಲು ನಿವಾಸಿ ಶೀನಪ್ಪ(46) ಎಂದು ಗುರುತಿಸಲಾಗಿದೆ.
ಉಜಿರೆಯಿಂದ ತಮಿಳುನಾಡಿಗೆ ರಬ್ಬರ್ ಶೀಟ್ ಸಾಗಾಟ ಮಾಡುತ್ತಿದ್ದ ಲಾರಿ TN 73-M-3499 ಯನ್ನು ಜು.25ರಂದು ದೋಣಿಗಲ್ನಲ್ಲಿ ರಸ್ತೆ ಕುಸಿತಗೊಂಡು ಸಂಚಾರ ಸಾಧ್ಯವಾಗದೇ ಇದ್ದ ಹಿನ್ನೆಲೆಯಲ್ಲಿ ಅದರ ಚಾಲಕ ಗುಂಡ್ಯದಲ್ಲಿ ನಿಲ್ಲಿಸಿದ್ದರು. ಮರು ದಿನ ಬೆಳಿಗ್ಗೆ ತಮಿಳುನಾಡು ಮೂಲದವರಾದ ಲಾರಿಯ ನಿರ್ವಾಹಕ ಲಾರಿಗೆ ಅಳವಡಿಸಲಾಗಿದ್ದ ಟರ್ಪಾಲ್ನಲ್ಲಿ ನಿಂತಿದ್ದ ನೀರು ತೆಗೆಯಲೆಂದು ಲಾರಿಯ ಮೇಲೆ ಹತ್ತಿದ್ದು ಅಲ್ಲಿಂದ ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು.ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ನಿರ್ವಾಹಕ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ನಿರ್ವಾಹಕನ ಮೃತದೇಹವನ್ನು ಚಾಲಕ ತಮಿಳುನಾಡಿಗೆ ಕೊಂಡೊಯ್ದು ಕುಟುಂಬಸ್ಥರಿಗೆ ಒಪ್ಪಿಸಿ ಮರುದಿನ ಲಾರಿ ನಿಲ್ಲಿಸಿದ್ದ ಗುಂಡ್ಯಕ್ಕೆ ಬಂದ ವೇಳೆ ಲಾರಿಯಿಂದ ಅರ್ಧದಷ್ಟು ರಬ್ಬರ್ ಶೀಟ್ ಕಳವುಗೊಂಡಿದ್ದು ಗಮನಕ್ಕೆ ಬಂದಿದೆ. ಈ ಬಗ್ಗೆ ಲಾರಿ ಚಾಲಕ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳಿಂದ ಕಳವು ಮಾಡಿದ ರಬ್ಬರ್ ಶೀಟ್ 25 ಕೆ.ಜಿ. ಯ 17 ಬಂಡಲ್ ರಬ್ಬರ್ ಶೀಟ್ಗಳು. ಇವುಗಳ ಒಟ್ಟು ತೂಕ 425 ಕೆ ಜಿ ಇದರ ಅಂದಾಜು ಮೌಲ್ಯ ರೂ.75,000/- ಹಾಗೂ ಮತ್ತು ರಬ್ಬರ್ ಶೀಟ್ ಸಾಗಿಸಲು ಉಪಯೋಗಿಸಿದ ಜೀಪು ಇದರ ಅಂದಾಜು ಮೌಲ್ಯ-1,50,000/ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ, ಉಪ್ಪಿನಂಗಡಿ ಠಾಣಾ ಪಿಎಸ್ಐ ಕುಮಾರ್ ಕಾಂಬ್ಳೆ, ಸಿಬ್ಬಂದಿಗಳಾದ ಎಎಸ್ಐ ಸೀತಾರಾಮ ಗೌಡ, ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಹಿತೋಷ್ ಕುಮಾರ್, ಹೆಚ್.ಸಿ ಕೃಷ್ಣಪ್ಪ ನಾಯ್ಕ , ಪಿಸಿ ಯೋಗರಾಜ್ ಪಾಲ್ಗೊಂಡಿದ್ದರು.
Discussion about this post