ಉಳ್ಳಾಲ, ಡಿ.16 : ನಗರದಲ್ಲಿ ಪೊಲೀಸರು ಡ್ರಗ್ಸ್ ವಿರುದ್ಧ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸಹ ಪೆಡ್ಲರ್ ಗಳು ಮಾತ್ರ ಪೊಲೀಸರ ಕಣ್ಣು ತಪ್ಪಿಸಿ ರಾಷ್ಟ್ರೀಯ ಹೆದ್ದಾರಿಗಳಲ್ಲೇ ರಾಜಾರೋಷವಾಗಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದಾರೆ. ಇದಕ್ಕೆ ಜ್ವಲಂತ ನಿದರ್ಶನವೆಂಬಂತೆ ಮಂಗಳೂರಿನಿಂದ ಕೇರಳಕ್ಕೆ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಎಂಡಿಎಂ ಡ್ರಗ್ಸನ್ನು ಸಾಗಾಟ ನಡೆಸುತ್ತಿದ್ದ ಕಾರೊಂದು ತಲಪಾಡಿಯಲ್ಲಿ ನಿಂತಿದ್ದ ಟ್ಯಾಂಕರ್ ಒಂದಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು ಈ ವೇಳೆ ಕಾರು ಚಾಲಕ ಪರಾರಿಯಾಗಿದ್ದು, ಸಹ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಮಂಗಳವಾರ ಬೆಳಗ್ಗೆ 7.30ರ ವೇಳೆ ಮಂಗಳೂರಿನಿಂದ ಉಪ್ಪಳದ ಕಡೆಗೆ ಧಾವಿಸುತ್ತಿದ್ದ ಕಾರು ತಲಪಾಡಿಯ ಆರ್ ಟಿಓ ಚೆಕ್ ಪೋಸ್ಟ್ ಬಳಿ ನಿಂತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಸಹ ಸವಾರ ಆದಮ್ ಗಂಭೀರ ಗಾಯಗೊಂಡಿದ್ದಾನೆ. ಗಾಯಾಳು ಆದಮ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಾರು ಚಾಲಕ ಸಿದ್ಧೀಕ್ ಎಂಬಾತ ಪರಾರಿಯಾಗಿದ್ದು ,ಕಾರಿನಲ್ಲಿದ್ದ 3.90 ಲಕ್ಷ ಮೌಲ್ಯದ 78 ಗ್ರಾಂ ಎಮ್ ಡಿಎಮ್ ಮಾದಕ ಪದಾರ್ಥವನ್ನು ಉಳ್ಳಾಲ ಪೊಲೀಸರು ದಸ್ತಗಿರಿ ನಡೆಸಿದ್ದಾರೆ.
ಕಾರಿನಲ್ಲಿದ್ದ ಸಿದ್ಧೀಕ್ ಮತ್ತು ಆದಮ್ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಗಳೆಂದು ತಿಳಿದುಬಂದಿದೆ. ಅಪಘಾತದ ಕುರಿತಂತೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post