ಮಂಗಳೂರು : ಬಿಜೆಪಿ ಸರ್ಕಾರ ಇಡಿ ಕಚೇರಿ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಮಂಗಳೂರಿನ ಐಟಿ ಕಚೇರಿಗೆ ನುಗ್ಗಲೆತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಇಡಿ ಕಚೇರಿ ದುರ್ಬಳಕೆ ಮಾಡಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಕೇಂದ್ರ ಬಿಜೆಪಿ ಸರ್ಕಾರ ಹಿಂಸಿಸುತ್ತಿದೆ ಎಂದು ಆರೋಪಿಸಿ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳೂರಿನ ಅತ್ತಾವರದಲ್ಲಿರುವ ಐಟಿ ಕಚೇರಿಗೆ ಮುತ್ತಿಗೆ ಯತ್ನ ನಡೆಯಿತು. ಕೆಪಿಸಿಸಿ ಉಪಾಧ್ಯಕ್ಷರಾದ ರಮಾನಾಥ ರೈ ಮತ್ತು ಐವನ್ ಡಿ’ಸೋಜಾ, ಪ್ರಧಾನ ಕಾರ್ಯದರ್ಶಿ ಮಿಥನ್ ರೈ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮುಖಂಡ ಜೆ.ಆರ್ ಲೋಬೊ ಮುಂತಾದವರ ನೇತೃತ್ವದಲ್ಲಿ ಫಲ್ನೀರ್ನ ಮಥಾಯಸ್ ಉದ್ಯಾನದಿಂದ ಅತ್ತಾವರದಲ್ಲಿರುವ ಐಟಿ ಕಚೇರಿ ವರೆಗೆ ಮೆರವಣಿಗೆ ನಡೆಯಿತು.
‘ಸಂವಿಧಾನ ವಿರೋಧಿ ಬಿಜೆಪಿ ಡೌನ್ ಡೌನ್, ಕೇಂದ್ರ ಸರ್ಕಾರಕ್ಕೆ ಧಿಕ್ಕಾರ…’ ಮುಂತಾದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಇ.ಡಿ ದಾಳಿಯನ್ನು ವಿರೋಧಿಸಿ ಘೋಷಣೆಗಳನ್ನು ಬರೆದುಕೊಂಡಿದ್ದ ಫಲಕಗಳನ್ನೂ ಕೈಯಲ್ಲಿ ಹಿಡಿದುಕೊಂಡಿದ್ದರು. ಐಟಿ ಕಚೇರಿ ಬಳಿಯ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದಾಗ ಸ್ವಲ್ಪ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬ್ಯಾರಿಕೇಡ್ಗಳನ್ನು ಹತ್ತಿ ಮುಖಂಡರು ಮುನ್ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಬಲಪ್ರಯೋಗ ಮಾಡಿ ತಡೆದರು. ಈ ಸಂದರ್ಭದಲ್ಲಿ ತಳ್ಳಾಟ–ನೂಕಾಟವಾಯಿತು. ನಂತರ ಎಲ್ಲರನ್ನೂ ವಶಕ್ಕೆ ಪಡೆದುಕೊಂಡು ವ್ಯಾನ್ ಮತ್ತು ಜೀಪ್ಗಳಲ್ಲಿ ಕರೆದುಕೊಂಡು ಹೋಗಿ ಕೆಲಕಾಲದ ನಂತರ ಬಿಡುಗಡೆ ಮಾಡಲಾಯಿತು.
Discussion about this post