ತಿರುವನಂತಪುರಂ | ಹಿರಿಯ ಕಾಂಗ್ರೆಸ್ ನಾಯಕ ಹಾಗು ಕೇರಳದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಉಮ್ಮನ್ ಚಾಂಡಿ ಅವರು ಇಂದು (ಮಂಗಳವಾರ) ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಗಂಟಲು ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಚಾಂಡಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಈ ವರ್ಷಾರಂಭದಲ್ಲಿ ನ್ಯೂಮೋನಿಯಾ ಬಾಧಿಸಿದ ಹಿನ್ನೆಲೆಯಲ್ಲಿ ಚಾಂಡಿ ಅವರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿತ್ತು. ಮಾಜಿ ಸಿಎಂ ನಿಧನದ ಸುದ್ದಿಯನ್ನು ಪುತ್ರ ಚಾಂಡಿ ಉಮ್ಮನ್ ಅವರು ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. “ಅಪ್ಪಾ ಮೃತಪಟ್ಟರು” ಎಂದು ತಿಳಿಸಿ ಹೆಚ್ಚೇನೂ ಈ ಬಗ್ಗೆ ಅವರು ಬರೆದಿಲ್ಲ.
2019ರಿಂದಲೂ ಚಾಂಡಿ ಅನಾರೋಗ್ಯದಿಂದ ಬಳಲುತ್ತಿದ್ದರು. ಗಂಟಲು ಸಂಬಂಧಿ ಖಾಯಿಲೆ ಉಲ್ಬಣಿಸಿದ ಕಾರಣಕ್ಕೆ ಅವರನ್ನು ಕೆಲವು ತಿಂಗಳ ಹಿಂದೆ ಚಿಕಿತ್ಸೆಗಾಗಿ ಜರ್ಮನಿಗೂ ಕರೆದುಕೊಂಡು ಹೋಗಲಾಗಿತ್ತು.
1970ರಿಂದಲೂ ಉಮ್ಮನ್ ಚಾಂಡಿ ಕಾಂಗ್ರೆಸ್ನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಎರಡು ಬಾರಿ (2004-2006 ಮತ್ತು 2011- 2016) ಮುಖ್ಯಮಂತ್ರಿಯಾಗಿದ್ದರು. ಪುತುಪಳ್ಳಿ ವಿಧಾನಸಭೆ ಕ್ಷೇತ್ರದಿಂದ ಇವರು ಐದು ದಶಕಗಳ ಆಯ್ಕೆಯಾಗಿ ಬಂದಿದ್ದರು ಎಂಬುದು ಇಲ್ಲಿ ಗಮನಾರ್ಹ.
Discussion about this post