ಸುಳ್ಯ, ಆ.19: ಹಕ್ಕು ಖುಲಾಸೆಗೆ ಅರ್ಜಿ ವಿಲೇವಾರಿ ಮಾಡಲು ಹಣದ ಬೇಡಿಕೆ ಇಟ್ಟು ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಕರಣಿಕ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಸುಳ್ಯದಲ್ಲಿ ಶನಿವಾರ ನಡೆದಿದೆ. ಅರಂತೋಡು ಗ್ರಾಮ ಕರಣಿಕ ಮಿಯಾಸಾಬ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಖಾತೆ ಬದಲಾವಣೆಗೆ ಎನ್ಓಸಿ ನೀಡಲು ಎಂಟು ಸಾವಿರ ನೀಡಬೇಕೆಂದು ವ್ಯಕ್ತಿಯೊಬ್ಬರ ಬಳಿ ಡಿಮ್ಯಾಂಡ್ ಮಾಡಿದ್ದ. ಇಂದು ಬೆಳಗ್ಗೆ ಹಣ ಪಡೆಯುತ್ತಿದ್ದಾಗಲೇ ಆರೋಪಿ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಕರಣಿಕ 8 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಅಲ್ಲದೆ, ಮೊದಲ ಕಂತಿನಲ್ಲಿ 3 ಸಾವಿರ ರೂಪಾಯಿ ಪಡೆದಿದ್ದ. ಬಾಕಿ ಉಳಿದ 5 ಸಾವಿರ ಹಣವನ್ನು ಇಂದು ಬೆಳಗ್ಗೆ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿದ್ದಾರೆ. ಗ್ರಾಮ ಕರಣಿಕ ಲಂಚದ ಬೇಡಿಕೆಯಿರಿಸಿರುವ ಬಗ್ಗೆ ಹರಿಪ್ರಸಾದ್ ಎರಡು ದಿನಗಳ ಹಿಂದೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಅದರಂತೆ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಂಚ ಸ್ವೀಕರಿಸುತ್ತಿರುವ ಆರೋಪಿಯ ಬಳಿ ಲಂಚದ 5 ಸಾವಿರ ರೂಪಾಯಿ ಪತ್ತೆಯಾಗಿದೆ. ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮ ಕರಣಿಕನನ್ನು ಬಂಧಿಸಿದ್ದಾರೆ. ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಮಹಜರು ಪ್ರಕ್ರಿಯೆ ನಡೆಸಿ, ಬಂಧಿತ ಗ್ರಾಮಕರಣಿಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಲೋಕಾಯುಕ್ತ ಎಸ್ಪಿ ಸೈಮನ್, ಡಿವೈಎಸ್ಪಿಗಳಾದ ಕಲಾವತಿ, ಚೆಲುವರಾಜು, ಟ್ರ್ಯಾಕ್ ಲೇಯಿಂಗ್ ಆಫೀಸರ್ ಅಮಾರುಲ್ಲಾ ಸೇರಿದಂತೆ ಮತ್ತಿತರ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
Discussion about this post